ದೈವಕ್ಕೆ ಕೈ ಮುಗಿದು ಕೆಲಸ ಆರಂಭಿಸದ ಗುತ್ತಿಗೆದಾರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ!
ಮಂಗಳೂರು ಮಹಾನಗರದಲ್ಲಿ ಅಂತಹಾ ಶಕ್ತಿಶಾಲಿ ದೈವ ಯಾವುದೆಂದು ಬಲ್ಲಿರಾ?
ಮಂಗಳೂರು: ತುಳುನಾಡಿನಲ್ಲಿ ದೈವಗಳ ಮಾತನ್ನು ಮೀರಿ ಯಾರೊಬ್ಬರೂ ಕೆಲಸ ಮಾಡುವುದಿಲ್ಲ. ಒಂದು ವೇಳೆ ಹಾಗೆ ಏನಾದರೂ ಮೀರಿದರೆ ದೈವಗಳೇ ಅವರಿಗೆ ತಮ್ಮ ಇರುವಿಕೆಯನ್ನು ತೋರಿದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇವೆ. ಈಗ ಇನ್ನೊಂದು ಅಂತಹುದೇ ಘಟನೆ ಮಂಗಳೂರು ಮಹಾನಗರದಲ್ಲೇ ಕಂಡುಬಂದಿದೆ. ಸರ್ಕಾರದ ಬಹು ನಿರೀಕ್ಷಿತ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯೊಂದು ನಿಂತು ಹೋಗಿದೆ.
ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆಗಳು ಜಾರಿಗೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ಅದರಲ್ಲಿ ನಗರದಲ್ಲಿ ಮಲ್ಟಿ ಕಾರು ಪಾರ್ಕಿಂಗ್ ಕಾಮಗಾರಿಗೂ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಒಂದು ಕಾಮಗಾರಿ ಮುಂದುವರೆಯುವ ಲಕ್ಷಣ ಗೋಚರಿಸುತ್ತಿಲ್ಲ. ಅಲ್ಲದೆ, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರನೂ ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ನಡೆದಿದೆ.
ಈ ಎಲ್ಲಾ ಬೆಳವಣಿಗೆಗೆ ಶರವು ಮಹಾ ಗುಳಿಗನೇ ಕಾರಣ ಎಂದು ಚರ್ಚೆಗಳಾಗುತ್ತಿವೆ. ಈ ಬಗ್ಗೆ ವರದಿಗಳೂ ಆಗಿವೆ. ಇತ್ತೀಚೆಗೆ ಶರವು ಮಹಾಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಗಾರಿ ವಿಚಾರವಾಗಿ ತನ್ನ ಕೋಪ ಹೊರಹಾಕಿದೆಯಂತೆ. ಅಲ್ಲದೆ, ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ.
ನಗರದಲ್ಲಿ ಕಾರ್ಪೋರ್ಚ್ ನಿರ್ಮಾಣದ ಕಾಮಗಾರಿಯ ಜವಾಬ್ದಾರಿಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗಿತ್ತು. ಕಾಮಗಾರಿ ಆರಂಭಕ್ಕೂ ಮುನ್ನ ಇಲ್ಲಿನ ಗುಳಿಗನಿಗೆ ಪೂಜೆ ಸಲ್ಲಿಸಿ, ನಂತರ ಸಂಕ್ರಾಂತಿ ದಿನ ಅಗೇಲು ನೀಡಲು ಇವರಿಗೆ ಸಲಹೆ ನೀಡಲಾಗಿತ್ತು. ಆದರೆ ದೈವದ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಗುತ್ತಿಗೆದಾರ, ಕನಿಷ್ಟ ದೈವಕ್ಕೆ ಕೈ ಮುಗಿದು ಕೆಲಸ ಆರಂಭಿಸಲಿಲ್ಲ. ಇದೇ ಕಾರಣದಿಂದ ಈಗ ಆತನಿಗೆ ಅನಾರೋಗ್ಯ ಕೂಡ ಕಾಡಿದೆ ಎಂಬ ವಿಚಾರ ಚರ್ಚೆಯಲ್ಲಿದೆ. ಅಲ್ಲದೆ, ಆತನ ಬದಲಿಗೆ ಬಂದ ಆತನ ಮ್ಯಾನೇಜರ್ಗೆ ದೈವ ಆತನನ್ನೇ ಕರೆದುಕೊಂಡು ಬಾ ಎಂದಿದೆಯಂತೆ.
ಸುಮಾರು ಮೂರು ವರ್ಷಗಳ ಹಿಂದೆ ಈ ಕಾಮಗಾರಿಗೆ 70 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಶೇ. 10ರಷ್ಟು ಕೆಲಸ ಮಾತ್ರ ಆಗಿದೆ. ಸದ್ಯ ಗುತ್ತಿಗೆದಾರ ಆಸ್ಪತ್ರೆಯಲ್ಲಿದ್ದು, ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಅರ್ಧಕ್ಕೆ ಉಳಿದ ಕಾಮಗಾರಿ ಅಪಾಯದ ಸ್ಥಿತಿಯಲ್ಲಿದ್ದು, ಮಣ್ಣು ಕುಸಿತದ ಭೀತಿ ಎದುರಾಗಿದೆ.
ಶರವು ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಶರವು ಮಹಾಗುಳಿಗ ಇದಾಗಿದ್ದು, ಇಲ್ಲಿನ ಜನರು ಇದಕ್ಕೆ ಭಯಭಕ್ತಿಯಿಂದ ತಲೆ ಬಾಗುತ್ತಾರೆ. ಆದರೆ ದೈವದ ಬಗ್ಗೆ ಗೊತ್ತಿಲ್ಲದ ಗುತ್ತಿಗೆದಾರನ ಉದ್ದಟತನದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಸ್ಥಳೀಯ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ. ಇಲ್ಲೊಂದು ಗಂಡಾಂತರ ನಡೆಯಲಿದೆ ಎಂದು ದೈವ ಹೇಳಿರುವುದ ಜನರಿಗೆ ಆತಂಕವನ್ನು ಮೂಡಿಸಿದೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಇಲ್ಲಿನ ಮಣ್ಣಿನ ಬರೆ ಕುಸಿಯುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವೆನ್ನಲಾಗುತ್ತಿದೆ.
