ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ನಲ್ಲಿ ಭೂ ಕುಸಿತ ಉಂಟಾದ ಕಾರಣ ಘಾಟಿ ಬಂದ್ ಮಾಡಿ ಗುರುವಾರ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಂತೆ ಸೂಚಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿ ಆದೇಶದಂತೆ ಸಂಪಾಜೆ-ಮಡಿಕೇರಿ ಹೆದ್ದಾರಿಯನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಂದ್ ಮಾಡಲಾಗಿತ್ತು. ಇದರಿಂದ ಸಂಪಾಜೆ-ಮಡಿಕೇರಿ ಹೆದ್ದಾರಿಯಲ್ಲಿ ರಾತ್ರಿ 8 ಗಂಟೆ ಬಳಿಕ ಮಡಿಕೇರಿ ಜನರಲ್ ಕಾರ್ಯಪ್ಪ ಸರ್ಕಲ್ ಬಳಿ ಮತ್ತು ಸಂಪಾಜೆ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಯಾವುದೇ ಮುನ್ಸೂಚನೆಯಿಲ್ಲದಿದ್ದುದರಿಂದ ನೂರಾರು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿದ್ದವು. ಈ ನಡುವೆ ಜೋರಾಗಿ ಮಳೆ ಸುರಿಯುತ್ತಿದ್ದುದರಿಂದ ವಾಹನಗಳಲ್ಲಿದ್ದ ಮಹಿಳೆಯರು, ವೃದ್ಧರು, ರೋಗಿಗಳು ಸಾಕಷ್ಟು ಸಮಸ್ಯೆ ಅನುಭವಿಸುವಂತಾಯಿತು. ಕಾಡಿನ ನಡುವೆ ಶೌಚಾಲಯಕ್ಕೂ ಹೋಗಲಾಗದೆ, ನಿದ್ದೆಯೂ ಇಲ್ಲದೆ ಸುಮಾರು 5 ಗಂಟೆಗಳ ಕಾಲ ಪ್ರಯಾಣಿಕರು ಹೆದ್ದಾರಿಯಲ್ಲಿ ಅಕ್ಷರಶಃ ಒದ್ದಾಡಿದರು.
ಈ ವೇಳೆ ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಅವರು ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ರಶೀದ್ ವಿಟ್ಲ ಅವರ ಕರೆಗೆ ಸ್ಪಂದಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಅವರಿಗೆ ಕರೆ ಮಾಡಿದರು ಮತ್ತು ವಸ್ತು ಸ್ಥಿತಿಯ ವಿವರಣೆ ನೀಡುವಂತೆ ರಶೀದ್ಗೆ ತಿಳಿಸಿದರು. ಜಿಲ್ಲಾಧಿಕಾರಿ ಮತ್ತು ಎಸ್ಪಿಯವರಿಗೆ ರಶೀದ್ ಅವರು ಹೆದ್ದಾರಿಯಲ್ಲಾಗಿರುವ ಸಮಸ್ಯೆಗಳನ್ನು ವಿವರಿಸಿದ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾದರು.
ರಶೀದ್ ವಿಟ್ಲ ಅವರು ಯು.ಟಿ. ಖಾದರ್ಗೆ ಫೋನ್ ಮಾಡುವಾಗ 12.30 ಗಂಟೆ ಆಗಿತ್ತು. ಅಧಿಕಾರಿಗಳು ಮಾಹಿತಿ ಪಡೆದು ಕಾರ್ಯಪ್ರವೃತ್ತರಾಗಿ ರಾತ್ರಿ 1.30ರ ಸುಮಾರಿಗೆ ಪೊಲೀಸ್ ಇಲಾಖೆಯ ಹೈವೇ ಪ್ಯಾಟ್ರೋಲ್ ಮೂಲಕ ಪೊಲೀಸ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಎಲ್ಲಾ ವಾಹನಗಳನ್ನು ಮಡಿಕೇರಿಯಿಂದ ಸಂಪಾಜೆಗೆ ಮತ್ತು ಸಂಪಾಜೆಯಿಂದ ಮಡಿಕೇರಿವರೆಗೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾದರು. ಸುಮಾರು 5-6 ಗಂಟೆ ಹೆದ್ದಾರಿಯಲ್ಲಿ ಸಿಲುಕಿದ್ದ ಸಾವಿರಾರು ಮಂದಿ ಇದರಿಂದ ನಿಟ್ಟುಸಿರು ಬಿಡುವಂತಾಯಿತು.
ಜನ ಸಾಮಾನ್ಯರ ಕರೆಗೆ ಅಧಿಕಾರಿಗಳೂ ಸ್ಪಂದಿಸದ ಕಾಲದಲ್ಲಿ ಜನಪ್ರತಿನಿಧಿ, ಉನ್ನತ ಅಧಿಕಾರಿಗಳು ಸ್ಪಂದಿಸಿದ್ದು, ಅಧಿಕಾರಿಗಳಾದವರು, ಜನಪ್ರತಿನಿಧಿಗಳಾದವರು ಹೇಗಿರಬೇಕೆಂಬುದಕ್ಕೆ ಮಾದರಿಯಾಯಿತು. ಮಧ್ಯರಾತ್ರಿಯೂ ಕರೆ ಸ್ವೀಕರಿಸಿ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿದ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಜಾರಾಮ್ ಭಾರೀ ಮೆಚ್ಚುಗೆಗೆ ಪಾತ್ರರಾದರು.