ಕಳೆದ 2 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ವೈಭವೋಪೇತ ಹಾಗೂ ಶಿಸ್ತುಬದ್ಧವಾಗಿ ನಡೆದ ಉಚ್ಚಿಲ ದಸರಾವನ್ನು ಈ ಬಾರಿ (ಅ.3ರಿಂದ 12) ಸರ್ವರ ಸಹಕಾರದೊಂದಿಗೆ ಅಚ್ಚುಕಟ್ಟಾಗಿ, ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ.
ದಸರಾ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅಗತ್ಯ ಎಂದು ದ.ಕ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಹೇಳಿದರು. ದ.ಕ. ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಕ್ಷೇತ್ರಾಡಳಿತ ಸಮಿತಿ, ಉಚ್ಚಿಲ ದಸರಾ ಸಮಿತಿ ಸಹಯೋಗದೊಂದಿಗೆ ಬುಧವಾರ ಉಚ್ಚಿಲ ಮೊಗ ವೀರ ಭವನದ ಶಾಲಿನಿ ಜಿ.ಶಂಕರ್ ವೇದಿಕೆಯಲ್ಲಿ ಉಚ್ಚಿಲ ದಸರಾ- 2024 ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ದಸರಾ ಸಂದರ್ಭ ಕ್ಷೇತ್ರದಲ್ಲಿ ದಿನಂಪ್ರತಿ ಚಂಡಿಕಾಯಾಗ, ಭಜನೆ, ಸಹಸ್ರ ಸುಮಂಗಲೆಯರಿಂದ ಪ್ರತಿನಿತ್ಯ ಸಾಮೂಹಿಕ ಕುಂಕುಮಾರ್ಚನೆ, ಖ್ಯಾತ ಕಲಾವಿದರು, ಸ್ಥಳೀಯ ಮಹಿಳೆಯರಿಂದ ಪ್ರತೀ ದಿನ ಸಂಜೆ ಸಾಂಸ್ಕೃತಿಕ ಕಾಠ್ಯಕ್ರಮ, ಸ್ಪರ್ಧೆ ನಡೆಯಲಿದೆ ಎಂದರು. ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ವಿಭಿನ್ನವಾಗಿ ಹಾಗೂ ವಿಶ್ವಕ್ಕೆ ಮಾದರಿಯಾಗಿ ಉಚ್ಚಿಲ ದಸರಾ ನಡೆಸಲಾಗುತ್ತದೆ. ಮಹಾಲಕ್ಷ್ಮೀ ಬ್ಯಾಂಕ್ ಮತ್ತು ಮೀನು ಮಾರಾಟ ಫೆಡರೇಶನ್ ಉಚ್ಚಿಲ ದಸರಾದ ಭಾಗವಾಗಲಿದೆ. ಈ ಬಾರಿ ಮಹಿಳಾ ಹುಲಿವೇಷ, ಚಿತ್ರಕಲಾ ಸ್ಪರ್ಧೆಯನ್ನು ಸಂಸ್ಥೆಯಿಂದ ನಡೆಸಲಾಗುವುದು ಎಂದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಅಧ್ಯಕ್ಷತೆ ವಹಿಸಿ ಈ ಸುಮಾರು 4 ಕೋಟಿ ರೂ. ವೆಚ್ಚದ ಬಜೆಟ್ ನಿರ್ಧರಿಸಲಾಗಿದ್ದು, ಜಾತಿ ಮತ ಭೇದ ಮರೆತು ಸರ್ವರ ಸಹಕಾರ ಹಾಗೂ ನಾನಾ ಗ್ರಾಮ ಸಭೆಗಳು, ಮೀನುಗಾರ ಸಂಘಟನೆಗಳ ಬೆಂಬಲದೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದರು. ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂದ್ರೆ ಮಾತನಾಡಿದರು.
ದಸರಾ ಸಮಿತಿಗೆ ಪುನರಾಯ್ಕೆ: ಕಳೆದ ಬಾರಿ ಉಚ್ಚಿಲ ದಸರಾ ಯಶಸ್ವಿಯ ವಿನಯ ಕರ್ಕೇರ ಮಲ್ಪೆ ಯವರನ್ನು ಉಚ್ಚಿಲ ದಸರಾ- 2024 ಸಮಿತಿಯ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಅವರು ಈ ಬಾರಿಯ ದಸರಾ ಮಹೋತ್ಸವದ ನಾನಾ ಸಮಿತಿಗಳನ್ನು ಘೋಷಿಸಿದರು. ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್. ಸುವರ್ಣ, ಹಿರಿಯ ಮೊಗವೀರ ಮುಖಂಡರಾದ ಹರಿಯಪ್ಪ ಕೋಟ್ಯಾನ್, ದಯಾನಂದ ಸುವರ್ಣ, ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ ಬೋಳೂರು, ಮಹಾಜನ ಸಂಘದ ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾವ್ಯದರ್ಶಿ ಸುಜಿತ್ ಎಸ್.ಸಾಲ್ಯಾನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಚೇತನ್ ಬೇಂಗ್ರೆ, ಮನೋಜ್ ಪಿ. ಕಾಂಚನ್, ಸುಗುಣಾ ಕರ್ಕೇರ, ಉದಯಕುಮಾರ್ ಹಟ್ಟಿಯಂಗಡಿ, ವರದರಾಜ್ ಬಂಗೇರ, ಸತೀಶ್ ಅಮೀನ್ ಬಾರ್ಕೂರು, ಮನೋಹರ್ ಬೋಳೂರು, ಯುವರಾಜ್ ಉಪಸ್ಥಿತರಿದ್ದರು. ಶರಣಕುಮಾರ್ ಮಟ್ಟು ವಂದಿಸಿದರು.