Monday, January 20, 2025
Homeಉಡುಪಿಉಡುಪಿ: ಅದ್ಭುತ ಗಾಯಕ ಬಿ.ಕೃಷ್ಣ ಕಾರಂತ್ ನಿಧನ.!!

ಉಡುಪಿ: ಅದ್ಭುತ ಗಾಯಕ ಬಿ.ಕೃಷ್ಣ ಕಾರಂತ್ ನಿಧನ.!!

ಉಡುಪಿ : ದೇಶದ ಪ್ರಸಿದ್ಧ ರಂಗಕರ್ಮಿ ದಿವಂಗತ ಬಿ. ವಿ. ಕಾರಂತರ ಸಹೋದರ ಬಿ. ಕೃಷ್ಣ ಕಾರಂತರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಖ್ಯಾತ ಗಾಯಕ ಹಾಗೂ ರಂಗಕರ್ಮಿ ದಿವಂಗತ ಬಿ.ವಿ.ಕಾರಂತರ ಕಿರಿಯ ಸಹೋದರ ಬಿ.ಕೃಷ್ಣ ಕಾರಂತರು(76) ಇಂದು ಮಧ್ಯಾಹ್ನ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ರೀಜನಲ್ ರಿಸರ್ಚ್ ಸೆಂಟರ್ ( RRC) ನ ನಿವೃತ್ತ ಉದ್ಯೋಗಿಯಾಗಿದ್ದ ಇವರು ಅದ್ಭುತ ಹಾಡುಗಾರರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು, ಇವರ ಹಾಡಿನ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿದ್ದವು.

ರಂಗಭೂಮಿ ಉಡುಪಿಯ ಸದಸ್ಯರಾದ ಇವರು ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಹಿನ್ನೆಲೆ ಹಾಡುಗಾರರಾಗಿ ಬಹಳಷ್ಟು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಇವರನ್ನು ಇತ್ತೀಚಿಗೆ ರಂಗಭೂಮಿ ಉಡುಪಿ ಸಂಸ್ಥೆಯು ಗೌರವಿಸಿ ಸನ್ಮಾನಿಸಿತ್ತು.

ಇತ್ತೀಚೆಗಷ್ಟೇ ರಂಗಭೂಮಿ ಉಡುಪಿಯವರು ಸಾಂಸ್ಕೃತಿಕ ಮತ್ತು ರಂಗ ಕಲೆಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಬಿ.ಕೃಷ್ಣ ಕಾರಂತರನ್ನು ಸನ್ಮಾನಿಸಲಾಗಿತ್ತು. ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಅವರ ಅಚಲ ಬೆಂಬಲ ಮತ್ತು ಪ್ರೋತ್ಸಾಹವು ಸಮುದಾಯದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದೆ. ಅವರ ಅಗಲಿಕೆಯಿಂದ ಸಂಗೀತ ಮತ್ತು ರಂಗಭೂಮಿಗೆ ಅಪಾರ ನಷ್ಟವುಂಟಾಗಿದೆ.

ಸಾರ್ವಜನಿಕರು ಉಡುಪಿಯ ಕಿದಿಯೂರಿನಲ್ಲಿರುವ ಅವರ ನಿವಾಸದಲ್ಲಿ ಡಿಸೆಂಬರ್ 13 ರಂದು ಬೆಳಿಗ್ಗೆ 11:30 ರ ನಂತರ ಅಂತಿಮ ದರ್ಶನ ಪಡೆಯಬಹುದಾಗಿದೆ. ಮತ್ತು ವಿದೇಶದಲ್ಲಿರುವ ಅವರ ಪುತ್ರ ಆಗಮಿಸಿದ ಬಳಿಕ ಸಂಜೆ 6:30 ರ ಸುಮಾರಿಗೆ ಉಡುಪಿಯ ಇಂದ್ರಾಳಿ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಬಿ.ಕೃಷ್ಣ ಕಾರಂತರು ಪತ್ನಿ, ಇಬ್ಬರು ಪುತ್ರರು, ಸಂಬಂಧಿಕರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಈ ಸಾಧಕ ಕಲಾವಿದನಿಗೆ ರಂಗಭೂಮಿ ಉಡುಪಿ ಸಂತಾಪ ಸೂಚಿಸಿದೆ.

RELATED ARTICLES
- Advertisment -
Google search engine

Most Popular