ಜಿ.ಪಿ.ಟಿ. ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು ಸಾಧ್ಯ
ಉಡುಪಿ ಫೆ.13: ಸರ್ಕಾರಿ ನೌಕರಿ ದೊರಕುವುದೇ ಅಪರೂಪ, ಅದರಲ್ಲಿಯೂ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಆಯ್ಕೆಗೊಂಡಿರುವ ನಿಮ್ಮಿಂದ ಸಮಾಜಕ್ಕೆ ವಿಶೇಷವಾದ ನಿರೀಕ್ಷೆಗಳು ಇವೆ. ಈ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಕಲಿಸುವ ಸವಾಲನ್ನು ಸಮರ್ಥವಾಗಿ ನಿರ್ವಹಿಸಿರಿ, ಈಗಾಗಲೇ ಉತ್ತಮ ಶೈಕ್ಷಣಿಕ ಸಾಧನೆಯನ್ನು ನಡೆಸುತ್ತಿರುವ ಉಡುಪಿ ಜಿಲ್ಲೆಯ ಗೌರವವು ಹೆಚ್ಚಾಗುವಂತೆ ಕಾರ್ಯವು ನಿಮ್ಮಿಂದ ಸಾಧ್ಯವಾಗಲಿ ಎಂದು ಉಡುಪಿಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಇವರು ತಿಳಿಸಿದರು. ಅವರು ಉಡುಪಿ ಜಿಲ್ಲೆಯಲ್ಲಿ ನೇಮಕಗೊಂಡ 200 ಮಂದಿ ಜಿ.ಪಿ.ಟಿ.
ಶಿಕ್ಷಕರ ಬುನಾದಿ ತರಬೇತಿ ಕಾರ್ಯಾಗಾರದ ಉದ್ಘಾಟಕರಾಗಿ ಮಾತನಾಡುತ್ತಿದ್ದರು. ಇನ್ಫೋಸಿಸ್ ಯಕ್ಷಗಾನ ಕೇಂದ್ರ, ಉಡುಪಿ ಇಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ವೀರಗಾಥಾ 4.0 ಸ್ಪರ್ಧೆಯ ಬಹುಮಾನ ವಿಜೇತರಾದ ಕಾರ್ಕಳದ ಶ್ರೀಮದ್ ಭುವನೇಂದ್ರ ಶಾಲೆಯ ಕುಮಾರಿ ಸ್ನಿಗ್ಧಾ ಎ. ಹಾಗೂ ಹೆಬ್ರಿಯ ಎಸ್.ಆರ್. ಪಬ್ಲಿಕ್ ಶಾಲೆಯ ವಿಘ್ನೇಶ್ ಆಚಾರ್ಯ ಇವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರದ
ಅನುದಾನದಲ್ಲಿ ರಚನೆಗೊಂಡ ಶಿಕ್ಷಣ ಸಾಹಿತ್ಯ ಸಂಪದ ಕೃತಿಯ ಬಿಡುಗಡೆ ನಡೆಯಿತು.
ಉಡುಪಿ ಜಿಲ್ಲೆಯ ಕನ್ನಡ ಒಲಂಪಿಯಾಡ್ನಲ್ಲಿ ಜಿಲ್ಲಾ ಮಟ್ಟದ ಬಹುಮಾನ ವಿಜೇತರಿಗೆ ಬಹುಮಾನವನ್ನು ವಿತರಿಸಿದ ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಪ್ರತೀಕ ಬಾಯಲ್ ಇವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಣಿಪಾಲದ ರೋಟರಿ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ರಾಜವರ್ಮಾ ಅರಿಗ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಅಡಳಿತ) ಶ್ರೀ ಗಣಪತಿ ಕೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಡಯಟ್ ನ ಪ್ರಾಂಶುಪಾಲರಾದ ಮಂಜುನಾಥ ಎಚ್.ಟಿ. ಇವರು ಶಿಕ್ಷಕ ಕಾರ್ಯದಲ್ಲಿ ಬದ್ದತೆಯಿಂದ ತೊಡಗಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಸ್ವಾಗತವನ್ನು ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್, ವಂದನಾರ್ಪಣೆ ಹಿರಿಯ ಉಪನ್ಯಾಸಕ ಪ್ರಭಾಕರ ಮಿತ್ಯಾಂತ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಉಪನ್ಯಾಸಕ ಯೋಗಾ ನರಸಿಂಹ ಸ್ವಾಮಿ ಇವರು ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಶಿಶು ತಜ್ಞೆ ಡಾ. ಪ್ರೀತಿ ಗಲಗಲಿ, ಇವರು ಮಕ್ಕಳಲ್ಲಿ ಮೊಬೈಲ್ ಬಳಕೆ ವಿಷಯದಲ್ಲಿ ವಿವೇಕಾನಂದ ಅನುಸಂಧಾನ ಕೇಂದ್ರದ ನಿರ್ದೇಶಕರಾದ ಡಾ. ಎಚ್. ಎನ್. ಮುರಳೀಧರ ಇವರು ಶಿಕ್ಷಣ ಮತ್ತು ಮೌಲ್ಯಗಳು, ಮಣಿಪಾಲ ರೋಟರಿ ಹಿಲ್ಸ್ ನ ಅಧ್ಯಕ್ಷರಾದ ಶ್ರೀಮತಿ ಸುಪರ್ಣಾ ಇವರು ಜೀವನ ಕೌಶಲ ಅಭಿವೃದ್ಧಿ ತಂತ್ರಗಳು, ವಿಶ್ರಾಂತ ಉಪನ್ಯಾಸಕರು, ಸಿ.ಟಿ.ಇ. ಮಂಗಳೂರು ಡಾ. ಎನ್. ಶಿವಪ್ರಕಾಶ ಜಿ.ಪಿ.ಟಿ. ಶಿಕ್ಷಕರ ಕರ್ತವ್ಯಗಳ ಕುರಿತು ಮಾತನಾಡಿದರು.