ಉಡುಪಿ; ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆಕೆಯ ಬರ್ತಡೇ ದಿನವೇ ಯುವಕ ಚಾಕುವಿನಿಂದ ಇರಿದ ಘಟನೆ ಬ್ರಹ್ಮಾವರದ ಕೊಕ್ಕರ್ಣೆ ಎಂಬಲ್ಲಿ ನಡೆದಿದೆ.
ರಕ್ಷಿತಾ (24) ಚಾಕು ಇರಿತಕ್ಕೆ ಒಳಗಾದ ಯುವತಿ. ಆಕೆಯ ನೆರೆಮನೆಯ ಯುವಕ ಕಾರ್ತಿಕ್ ಚಾಕು ಇರಿದಿದ್ದು ಬಳಿಕ ಪರಾರಿಯಾಗಿದ್ದಾನೆ. ರಕ್ಷಿತಾಗೆ ಗಂಭೀರ ಗಾಯಗಳಾಗಿದ್ದು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಬ್ರಹ್ಮಾವರದಲ್ಲಿ ಸರ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಇಂದು ಬೆಳಗ್ಗೆ ಕೆಲಸಕ್ಕೆ ತೆರಳಲು ಮನೆಯಿಂದ ಬಸ್ ಸ್ಟ್ಯಾಂಡ್ ಗೆ ನಡೆದುಕೊಂಡು ಹೋಗುತ್ತಿದ್ದಾಗ ಬೆಳಗ್ಗೆ 8-30ರ ವೇಳೆಗೆ ಯುವಕ ಚಾಕುವಿನಿಂದ ಇರಿದಿದ್ದಾನೆ. ರಕ್ಷಿತಾನನ್ನು ಯುವಕ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಆಕೆಯ ಮನೆಯಲ್ಲಿ ಒಪ್ಪಿರಲಿಲ್ಲ. ಹೀಗಾಗಿ ಆಕೆ ಎರಡು ವಾರಗಳಿಂದ ಆತನ ನಂಬರ್ ಬ್ಲಾಕ್ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವಕ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

