ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನಿಯ. ಪೂಂಜಾ ಅವರ ಭಾಷಣ ನೋಡಿದ್ದೇನೆ. ಅವರ ಜೊತೆ ಚರ್ಚಿಸಿದ್ದೇನೆ. ವಿಷಯ ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರೀಶ್ ಪೂಂಜ ಬಂಧನ ಸಾಧ್ಯತೆ ಬಗ್ಗೆ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಾಸಕರು ಉದ್ವೇಗದಲ್ಲಿ ಮಾತನಾಡಿದ್ದಾರೆ. ಅದು ಸರಿ ಅಲ್ಲ ಎಂದು ಅವರಿಗೂ ಅರಿವಾಗಿದೆ. ಹಾಗಂತ ಪದೇಪದೇ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು ಎಂದು ಅವರು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಡವಲು ನೀವೇ ಕುಮ್ಮಕ್ಕು ಕೊಡುತ್ತಿದ್ದೀರಿ. ಶಶಿರಾಜ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಾಸಕರ ಬಂಧನಕ್ಕೆ ಮುಂದಾಗುವುದನ್ನು ಕೈಬಿಡಬೇಕು. ಗೃಹ ಸಚಿವರು ಎಸ್ಪಿ ಜೊತೆ ಮಾತನಾಡಿ ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಯುವ ಮೋರ್ಚಾ ಮುಖಂಡ ಶಶಿರಾಜ್ ಬಂಧನ ವಿರೋಧಿಸಿ ಶಾಸಕ ಪೂಂಜ ಠಾಣೆಯಲ್ಲಿ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ನಂತರ ನಡೆದ ಪ್ರತಿಭಟನೆಯಲ್ಲೂ ಅವರು ಪೊಲೀಸರಿಗೆ ಬೆದರಿಕೆಯೊಡ್ಡಿದ್ದಾರೆ, ನಿಂದಿಸಿದ್ದಾರೆ ಎಂಬ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಇಂದು ಪೊಲೀಸರು ಅವರನ್ನು ಬಂಧಿಸಲೆಂದು ತೆರಳಿದ್ದಾರೆ.