ವಿಶ್ವ ಕೊಂಕಣಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ರವೀಂದ್ರ ಮನೋಹರ್ ದರ್ಶನ್ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಅನುದಾನ ಕುರಿತ ಮಾಹಿತಿ ಪುಸ್ತಕವನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ ಎ. ನಂದಗೋಪಾಲ ಶೆಣೈ ಬಿಡುಗಡೆಗೊಳಿಸಿದರು. ಪುಸ್ತಕ ಅನುದಾನ ಕಾರ್ಯಕ್ರಮದ ಪ್ರಧಾನ ಸಂಪಾದಕ ಸಾಹಿತಿ ಎಚ್. ಎಮ್. ಪೆರ್ನಾಲ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಉಸ್ತುವಾರಿಯಲ್ಲಿ ನಡೆಯುವ ಈ ಯೋಜನೆಯ ಪ್ರಕಾರ ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು ತಲಾ ರೂ. 40,000/-ಮುದ್ರಣವೆಚ್ಚವನ್ನು ನೀಡಲಾಗುವುದು. ಪುಸ್ತಕ ಲೇಖಕರ ಸ್ವಂತ ಕೃತಿಯಾಗಿದ್ದು ಕವಿತೆ, ಸಣ್ಣ ಕತೆ, ಪ್ರಬಂದ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ನಾಟಕ, ಕಾದಂಬರಿ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಈ ಯೋಜನೆ ಅನ್ವಯವಾಗುತ್ತದೆ. ಪುಸ್ತಕ ದೇವನಾಗರಿ, ಕನ್ನಡ ಅಥವಾ ರೊಮಿ ಲಿಪಿಯಲ್ಲಿ ಇರಬಹುದು. ಮಕ್ಕಳ ಸಾಹಿತ್ಯ ಪುಸ್ತಕ ಕನಿಷ್ಠ 49 ಪುಟ ಹಾಗೂ ಇತರ ಸಾಹಿತ್ಯ ಪುಸ್ತಕ ಕನಿಷ್ಠ 80 ಪುಟಗಳಷ್ಟು ಇರಲೇಬೇಕು. ಮುದ್ರಣಕ್ಕೆ ಸಿದ್ದ ಪ್ರತಿಯನ್ನು ಸಂಪಾದಕರು, ಎಂಡಿವಿಕೆ, ರಾಹುಲ್ ಎಡ್ವಟೈಸರ್ಸ್, 405, ಕುನಿಲ್ ಕೊಂಪ್ಲೆಕ್ಸ್, ದ್ವಿತೀಯ ಮಹಡಿ, ಬೆಂದೂರ್ ವೆಲ್, ಮಂಗ್ಳುರ್ -575002 ಇಲ್ಲಿಗೆ ಕಳುಹಿಸಿ ಕೊಡಬೇಕು. ಪಿಡಿಎಫ್ ಪ್ರತಿಯನ್ನು visionkonkani@gmail.com ಈ ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಪುಸ್ತಕಕ್ಕೆ ಐಎಸ್ಬಿಎನ್ ಕ್ರಮಾಂಕವನ್ನು ಪಡೆಯುವುದು ಲೇಖಕರ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಯೋಜನೆಯಡಿ 21 ಪುಸ್ತಕಗಳು ಪ್ರಕಟವಾಗಿದ್ದು 40 ಲಕ್ಷ ವೆಚ್ಚದ ಈ ಯೋಜನೆ 100 ಪುಸ್ತಕಗಳು ಪ್ರಕಟವಾಗುವ ವರೆಗೆ ಚಾಲ್ತಿಯಲ್ಲಿರುತ್ತದೆ. ಹೆಚ್ಚಿನ ವಿವರಗಳಿಗೆ ಯೋಜನೆಯ ಸಂಪಾದಕ ಎಚ್. ಎಮ್. ಪೆರ್ನಾಲ್ ಇವರನ್ನು 9449770629 ದೂರವಾಣಿಯಲ್ಲಿ ಸಂಪರ್ಕಿಸಬಹುದು.