ಮಂಗಳೂರು: ನಗರದ ಬಿಕರ್ನಕಟ್ಟೆಯ ಕೈಕಂಬ ಮಾರ್ಗದ ಬದಿಯಲ್ಲಿ ರಾಸಿ ರಾಶಿ ಕಸವನ್ನು ಹಾಕಿ, ಪರಿಸರವನ್ನು ಹಾಳು ಮಾಡಲಾಗಿದೆ. ಈ ಪ್ರದೇಶದಲ್ಲಿ ಕಸ ಹಾಕಬೇಡಿ ಎಂದು ಹಿಂದೆ ಸ್ಥಳೀಯರು ಜಾಗೃತಿಯ ಚಿಂತನೆಯಲ್ಲಿ ಬ್ಯಾನರ್ ಹಾಕಿದ್ದು, ಅದನ್ನೂ ಲೆಕ್ಕಿಸದೆ ಕೆಲವರು ಇಲ್ಲೇ ಕಸ ಹಾಕುತ್ತಿದ್ದಾರೆ. ವಿವಿಧ ನಮೂನೆಯ ಜ್ವರಗಳು, ವಿಶೇಷವಾಗಿ ಡೆಂಗ್ಯೂವಿನಂತಹ ಮಾರಕ ಜ್ವರಗಳು ಹರಡುತ್ತಿರುವ ನಡುವೆ, ಈ ಕಸದ ರಾಶಿ ಆರೋಗ್ಯ ಸಮಸ್ಯೆಯ ಅಂತಕವನ್ನು ಹೆಚ್ಚಿಸುತ್ತಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.
ಸ್ವಚ್ಛ ಭಾರತ್ ಯೋಜನೆ ಭಾರತದಲ್ಲಿ ಜಾರಿಯಾಗಿ ಕೆಲವು ವರುಷಗಳು ಕಳೆಯಿತು. ಜೊತೆಗೆ ಸ್ಮಾರ್ಟ್ ಸಿಟಿ ಎಂಬ ಯೋಜನೆಯಲ್ಲಿಯೂ ಮಂಗಳೂರಿನ ಹೆಸರು ಇದೆ. ಆದರೆ ಯೋಜನೆಗಳು ಎಷ್ಟರ ಮಟ್ಟಿಗೆ ಸಮಾಜಕ್ಕೆ ಹತ್ತಿರವಾಗಿದೆ? ಎಷ್ಟರ ಮಟ್ಟಿಗೆ ಯೋಜನೆಗಳ ಮಹತ್ವಗಳು ಸಮಾಜದ ಪ್ರಭಾವ ಬೀರುತ್ತಿದೆ? ಎಷ್ಟರ ಮಟ್ಟಿಗೆ ಸಮಾಜಕ್ಕೆ ಯೋಜನೆಗಳ ಒಳಗೆ ಇರುವ ಸಂದೇಶಗಳು ಸಮಾಜಕ್ಕೆ ಅರ್ಥವಾಗುತ್ತದೆ? ಎಂಬುದು ಸಮಾಜದ ಪ್ರಜ್ಞಾವಂತ ನಾಗರಿಕರಲ್ಲಿ ಇರುವ ಪ್ರಶ್ನೆಯಾಗಿದೆ. ಅದಷ್ಟು ಬೇಗ ಸಂಬಂಧ ಪಟ್ಟ ಇಲಾಖೆಗಳು ಕಠಿಣ ಕ್ರಮಗಳೊಂದಿಗೆ ಇತ್ತ ಗಮನವಹಿಸಿ, ಸಮಾಜದ ಜನಸಾಮಾನ್ಯರಿಗೆ ಆರೋಗ್ಯವಂತ ಪರಿಸರ ನಿರ್ಮಾಣ ಮಾಡಿಕೊಟ್ಟು ಸಹಕರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.