ಲಕ್ನೊ: ಉತ್ತರ ಭಾರತದಲ್ಲೂ ಮಳೆಯ ಆರ್ಭಟಕ್ಕೆ ಜನ ತತ್ತರಿಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಳೆಯ ಅಬ್ಬರ ಜನಜೀವನ ಅಸ್ತವ್ಯಸ್ಥವಾಗಿದೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲೂ ನಗರಗಳು ಜಲಾವೃತಗೊಂಡಿವೆ. ಆದರೆ ಉತ್ತರ ಪ್ರದೇಶದ ಲಕ್ನೊದ ದರ್ಶನ್ ಪಾರ್ಕ್ ಬಳಿ ನಡೆದ ಘಟನೆಯೊಂದು ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ದರ್ಶನ್ ಪಾರ್ಕ್ ಬಳಿ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಆಟವಾಡುತ್ತಿದ್ದ ಯುವಕರ ಗುಂಪೊಂದು ಬೈಕ್ ಸವಾರರಿಗೆ ನೀರು ಎರಚಿರುವ ವಿಡಿಯೋ ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.
ಸುಮಾರು 20ರಿಂದ 30 ಯುವಕರು ಮಳೆ ನೀರಿನಲ್ಲಿ ಆಟವಾಡುತ್ತಿದ್ದರು. ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನಗಳ ಮಳೆ ನೀರನ್ನು ಎರಚಿ ಪುಂಡಾಟ ಮೆರೆಯುತ್ತಿದ್ದರು. ಈ ವೇಳೆ ಒಂದು ಬೈಕಿನಲ್ಲಿ ಒಬ್ಬ ಯುವಕ ಮತ್ತು ಯುವತಿ ಬರುತ್ತಾರೆ. ಈ ವೇಳೆ ಬೈಕಿನಲ್ಲಿದ್ದವರ ಮೇಲೆ ನೀರು ಎರಚುತ್ತಾ, ಬೈಕಿನಲ್ಲಿದ್ದ ಇಬ್ಬರನ್ನು ಕೆಳಗೆ ತಳ್ಳುತ್ತಾರೆ. ಇದರ ನಡುವೆ ಗುಂಪಿನಲ್ಲಿದ್ದ ಒಬ್ಬ ಯುವಕ ಯುವತಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದೀಗ ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಕಿಡಿಗೇಡಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ವೀಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ….