ಮಳೆಗಾಲದಲ್ಲಿ ಚಿಕ್ಕಮೇಳ ದಂಧೆ ತಡೆಯಲು ಹೊಸ ನೀತಿ: ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

0
1641

ಚಿಕ್ಕಮೇಳಗಳಿಗೆ ನಿಯಮ ರೂಪಿಸಿದ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ, ದ.ಕ. ಜಿಲ್ಲೆ ಕೇಂದ್ರ ಸಮಿತಿ
ಮಂಗಳೂರು: ಮಳೆಗಾಲದಲ್ಲಿ ಮನೆಮನೆಗಳಿಗೆ ತೆರಳಿ ಕಿರು ಯಕ್ಷಗಾನಗಳನ್ನು ಪ್ರದರ್ಶಿಸುವ ಚಿಕ್ಕಮೇಳದ ಬಗ್ಗೆ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ, ದ.ಕ. ಜಿಲ್ಲೆ ಕೇಂದ್ರ ಸಮಿತಿ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಸಮಿತಿಯ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ.
ಯಕ್ಷಗಾನ ಕಲೆಯನ್ನು ಆಶ್ರಯಿಸಿಕೊಂಡು ಜೀವನ ಕಟ್ಟಿಕೊಂಡವರು ಹಲವಾರು ಕಲಾವಿದರು ಅದೂ ಚಿಕ್ಕ ಸಂಪಾದನೆಯಿಂದ ಆದರೂ ಗೌರವ ಪೂರ್ವಕವಾದ ಬದುಕಿಗಾಗಿ ನಮ್ಮ ಪೂರ್ವಿಕರು ಮಳೆಗಾಲದಲ್ಲಿ ಬಡತನದ ರೇಖೆಗಿಂತ ಕೆಳಗಿನ ಹಂತದ ಜೀವನ ಮಾಡುವ ಪೂರ್ಣ ಪ್ರಮಾಣದ ಕಲಾವಿದರು ತನ್ನ ಜೀವನೋಪಾಯಕ್ಕಾಗಿ ಮನೆ ಮನೆಗೆ ತೆರಳುವ “ಚಿಕ್ಕಮೇಳ” ಅಥವಾ “ರಾಧಾಕೃಷ್ಣ” ಎಂಬ ಹೆಸರಿನಿಂದ ಪ್ರತಿ ಹಿಂದೂಗಳ ಮನೆಯ ಚಾವಡಿಯಲ್ಲಿ ಪ್ರದರ್ಶನ ನೀಡುತ್ತಿದ್ದರು. ದೇವರ ಭಾವಚಿತ್ರಕ್ಕೆ ದೀಪಹಚ್ಚಿ, ಗಣಪತಿ ಸ್ವಸ್ಥಿಕ ಇಟ್ಟು, ಹಿಮ್ಮೇಳದವರು (ಭಾಗವತರು ಮದ್ದಲೆ ವಾದಕರು ಶ್ರುತಿಯವರು ಅಲ್ಲದೆ ಒಂದು ಪುರುಷ ಪಾತ್ರ ಇನ್ನೊಂದು ಸ್ತ್ರೀಪಾತ್ರ) ಕನಿಷ್ಠ ಸಮಯದಲ್ಲಿ ಪುರಾಣ ಅಥವಾ ಇತಿಹಾಸದ ಒಂದು ತುಣುಕನ್ನು ಆಧರಿಸಿ ಪ್ರದರ್ಶನಗೊಳಿಸಿ ಮನೆಯವರಿಂದ ಗೌರವ ಸಂಭಾವಣೆ ಪಡೆದು ಅಲ್ಲಿಂದ ತೆರಳುವರು ಈ ತಂಡ ಮಳೆಗಾಲವನ್ನು ಆಯ್ಕೆಗೊಳಿಸಿ ಅಭ್ಯಾಸಿ ಕಲಾವಿದರನ್ನು ಒಟ್ಟು ಮಾಡಿಕೊಂಡು “ಸಂಚಾರಿ ಚಿಕ್ಕ ಮೇಳ” ಎಂಬ ಹೆಸರಿನಲ್ಲಿ ತಿರುಗಾಟ ಮಾಡುವ ಸಂಪ್ರದಾಯ ಈ ಹಿಂದಿನಿಂದಲೂ ಇತ್ತು. ಕಾಲ ಬದಲಾದಾಗ ಕೆಲವು ಚಿಕ್ಕ ಮೇಳಗಳು ಶಿಸ್ತು ಉಲ್ಲಂಘಿಸಿ ಕೆಲವು ಕಡೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಗೊಂಡು ನಮ್ಮ ಜಿಲ್ಲೆಯಲ್ಲಿ ಅದೊಂದು ದಂಧೆಯಾಗಿ ವ್ಯಾಪಕವಾಗಿತ್ತು. ಕಳೆದ ಬಾರಿ ಒಂದೆರಡು ಅನಪೇಕ್ಷಿತ ಘಟನೆಗಳು ಕೂಡಾ ನಡೆದವು. ಈ ಎಲ್ಲಾ ವಿಚಾರವಾಗಿ ಅಶಿಸ್ತು ಹಾಗೂ ಅಸಂಬದ್ಧ ನಡೆಯಬಾರದು ಎನ್ನುವ ಉದ್ದೇಶ ಇರಿಸಿಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ಚಿಕ್ಕ ಮೇಳಗಳ ಮುಖಂಡರನ್ನು ಹಾಗೂ ಕಲಾವಿದರನ್ನು ಒಂದೇ ರೀತಿಯ ನಿಯಮಾವಳಿಗೆ ಒಳಪಡಿಸಿ ಚಿಕ್ಕಮೇಳಗಳ ಬಗ್ಗೆ ಕಲಾಭಿಮಾನಿಗಳಿಗೆ ಇರುವ ಭಾವನೆಗಳನ್ನು ಆಧರಿಸಿ “ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದ.ಕ. ಜಿಲ್ಲೆ” ನಾಮಾಂಕಿತಗೊಂಡು ಕಾರ್ಯಾಚರಿಸುತ್ತಿದೆ. ಎಲ್ಲಾ ಚಿಕ್ಕ ಮೇಳಗಳ ತಂಡಗಳು ನೋಂದಾವಣೆಗೊಂಡು ಒಕ್ಕೂಟದ ಅಧಿಕೃತ ಪರವಾನಿಗೆ ಪಡೆದು ತಿರುಗಾಟ ಮಾಡಲಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 10.30 ತನಕ ಕನ್ನಡ ಮತ್ತು ತುಳುಭಾಷೆಗಳ ಯಾವುದಾದರೂ ಗರಿಷ್ಠ 20 ನಿಮಿಷಗಳನ್ನ ಮೀರದ ಒಳ್ಳೆಯ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ನಡೆಯಲಿದೆ ಎಂದು ಸಮಿತಿಯು ತಿಳಿಸಿದೆ.

ತೆಂಕತಿಟ್ಟು ಚಿಕ್ಕಮೇಳಗಳ ಒಕ್ಕೂಟ ದ.ಕ ಜಿಲ್ಲೆ ಚಿಕ್ಕಮೇಳಕ್ಕೆ ನಿಬಂಧನೆಗಳು

  1. ಶಿಸ್ತು, ಸರಳತೆ, ಭಕ್ತಿಯೊಂದಿಗೆ ಮನೆ ಪ್ರವೇಶ.
  2. ಮನೆಯೊಳಗೆ ಪ್ರವೇಶ ಮಾಡುವಾಗ ದೇವರ ಫೋಟೋ ವೇಷಧಾರಿಯ ಕೈಯಲ್ಲೇ ಇರಬೇಕು. ಇತರ ಕೆಲಸ ಸಹಾಯಕರು ಸಹಾಯ ಮಾಡಬಹುದು.
  3. ಗಣಪತಿ ಸ್ವಸ್ತಿಕ ಕಡ್ಡಾಯ ಎಂದು ಹೇಳಬಾರದು ಅನುಕೂಲವಿದ್ದರೆ ಮಾಡಿದರೆ ಉತ್ತಮ ಎಂದು ಮಾತ್ರ ಹೇಳಬಹುದು. (ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಬಾಳೆಲೆ, ವೀಳ್ಯದೆಲೆ, ಅಡಿಕೆ)
  4. ವೇಷ ಭೂಷಣ ಒಪ್ಪ ಓರಣವಾಗಿರಬೇಕು
  5. ಹಿಮ್ಮೇಳದವರು ಮುಂಡಾಸು ಇಟ್ಟು ತಿಲಕ ಇಟ್ಟು ಶ್ವೇತ ವಸ್ತ್ರಧಾರಿಗಳಾಗಿದ್ದರೆ ಶೋಭೆ ಹೆಚ್ಚುವುದು.
  6. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಮಾತಾಡಿಕೊಂಡು ನೆಗಾಡುತ್ತಾ ಹೋಗಬಾರದು ಮೌನಕ್ಕೆ ಪ್ರಾಶಸ್ತ್ರ ನೀಡಬೇಕು.
  7. ಮನೆಯ ವರಾಂಡ(ಸಿಟೌಟ್) ಅಥವಾ ಚಾವಡಿಯಲ್ಲಿ ಮಾತ್ರ ಪ್ರದರ್ಶಿಸಬೇಕು. ಕರಪತ್ರ ನೀಡಿದ ನಂತರ ಮನೆಯವರು ಒಪ್ಪಿಗೆ ಕೊಟ್ಟನಂತರ ಎಲ್ಲಿ ಪ್ರದರ್ಶನ ಮಾಡಬಹುದೆಂದು ಮನೆಯವರಲ್ಲಿ ತಿಳಿದುಕೊಳ್ಳಬಹುದು.
  8. ಚೌಕಿಯಿಂದ ಹೊರಟ ಬಳಿಕ ಧೂಮಪಾನ, ಮಧ್ಯಪಾನ, ಗುಟ್ಕಾ, ಮಧು ಇತ್ಯಾದಿಗಳ ಸೇವನೆ ಕಡ್ಡಾಯವಾಗಿ ನಿಷೇದ.
  9. ಪ್ರದರ್ಶನ ಸಂಧರ್ಭ ಎಲ್ಲಾ ಕಲಾವಿದರು ತಮ್ಮ ಮೊಬೈಲನ್ನು “ಮೌನ” ದಲ್ಲಿ ಇಡಲೇಬೇಕು ಯಾವುದೇ ಕಾರಣಕ್ಕೂ ಪ್ರದರ್ಶನದ ಮನೆಯಲ್ಲಿ ಮೊಬೈಲ್ ಉಪಯೋಗ ಮಾಡಬಾರದು.
  10. ಕೊನೆಗೆ ಭಾಗವತರು ಚಿಕ್ಕಮೇಳ ಹೊರಟ ಕ್ಷೇತ್ರದ ಬಗ್ಗೆ ಹಾಗೂ ಚಿಕ್ಕ ಮೇಳದ ಪ್ರದರ್ಶನ ನೀಡುವ ಪ್ರಯೋಜನದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಬೇಕು.
  11. ಕನಿಷ್ಟ 20 ನಿಮಿಷಕ್ಕಿಂತ ಕಡಿಮೆ ಇರದಂತೆ ಪ್ರದರ್ಶನ ಮತ್ತು ಪ್ರಸಾದನೀಡಿ ಹೊರಡಬೇಕು.
  12. ಪ್ರಸಾದವನ್ನು ನೀಡಿ ಹಿರಿಯರ ಆಶೀರ್ವಾದವನ್ನು (ಅನಗತ್ಯ ಮಾತುಕತೆ ಬೇಡ)ಪಡೆದು ತೆರಳಬೇಕು.
  13. ಮೊದಲ ದಿನ ಕರಪತ್ರ ಕೊಡಲು ಹೋಗುವ ವ್ಯಕ್ತಿ ಶುಚಿರ್ಭೂತನಾಗಿ ಮನೆಯವರಿಗೆ ನಮಸ್ಕಾರ ಮಾಡಿ ಕರಪತ್ರ ನೀಡಿ ತಮ್ಮಲ್ಲಿಗೆ ಬರುವ ಸಮಯವನ್ನು ತಿಳಿಸಿದರೆ ಉತ್ತಮ.
  14. ಕರಪತ್ರದಲ್ಲಿ ಇಂತಿಷ್ಟು ಮೌಲ್ಯ ನೀಡಬೆಕೆಂದು ಸೂಚಿಸಬಾರದು.
  15. ಅತೀ ಪರಿಚಯದವರ ಮನೆಯಾದರೆ ಮಂಗಳದೊಂದಿಗೆ ಮುಕ್ತಾಯ ಮಾಡಿ ಅವರು ವ್ಯವಸ್ಥೆ ಮಾಡಿದ್ದರೆ ಊಟ ಮಾಡಬಹುದು.
  16. ಮನೆಯವರು ಪಾನೀಯ ಕೊಟ್ಟರೆ ನಿರಾಕರಿಸಬಾರದು ಸ್ವಲ್ಪವಾದರು ಎಲ್ಲರೂ ಸ್ವೀಕರಿಸಲೆಬೇಕು.

ಸಂಘಟಕರಿಗೆ ನಿಬಂಧನೆಗಳು:
ತಂಡದ ವ್ಯಕ್ತಿಯ ಹೆಸರು ವಿಳಾಸ ಭಾವಚಿತ್ರ ದೂರವಾಣಿ ಸಂಖ್ಯೆ.
ಕಲಾವಿದರ ಹೆಸರು ವಿಳಾಸ ಭಾವಚಿತ್ರ ದೂರವಾಣಿ ಸಂಖ್ಯೆ.
ಸಹಾಯಕರು ಹೆಸರು ವಿಳಾಸ ಭಾವಚಿತ್ರ ದೂರವಾಣಿ ಸಂಖ್ಯೆ.

  1. ಕಲಾವಿದರ ಬಗ್ಗೆ ವೃತ್ತಿ ಮೇಳದ ಯಜಮಾನರ ಶಿಫಾರಸ್ಸು ಪತ್ರ.
  2. ತಾವು ಸುತ್ತಾಟ ಮಾಡುವ ಗ್ರಾಮಗಳ ಗ್ರಾಮಾಧಿಕಾರಿ (ಪಿ.ಡಿ.ಒ) ಇವರ ಅನುಮತಿ ಪತ್ರ
  3. ದೇವಸ್ಥಾನ ಆಡಳಿತಾಧಿಕಾರಿ / ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಅನುಮತಿ ಪತ್ರ.
  4. ತಿರುಗಾಟ ಮಾಡುವ ವ್ಯಾಪ್ತಿಯ ಆರಕ್ಷಕ ಠಾಣೆಯಿಂದ ಅನುಮತಿ (ಇದನ್ನು ವಿಮರ್ಶಿಸಿ)
  5. ತಿರುಗಾಟದ ಸಮಯ ಹತ್ತನಾವಧಿಯಿಂದ ದೀಪಾವಳಿ ತನಕ
  6. ತಿರುಗಾಟದ ಅವಧಿ ಸಂಜೆ 5.30 ರಿಂದ 10.30 ರೊಳಗೆ ಮುಗಿಯಬೇಕು.
  7. ಕರಪತ್ರದಲ್ಲಿ ತಂಡದ ಪ್ರಮುಖರ ಮೊಬೈಲ್ ನಂಬ್ರ,ನಮೂದಿಸಬೇಕು.
  8. ಪೂರ್ತಿ ಮೇಲಿನ ನಿಬಂಧಗಳಿಗೆ ಪ್ರಾಶಸ್ತ್ರ ನೀಡಬೇಕು. ಉಲ್ಲಂಘಿಸಿದಲ್ಲಿ ಒಕ್ಕೂಟದಿಂದ ಕೈ ಬಿಡಲಾಗುವುದು ಮತ್ತು ಸಂಬಂಧಿತ ದೇವಸ್ಥಾನ ಹಾಗೂ ಪೊಲೀಸ್ ಠಾಣೆಗೆ ಮತ್ತು ಆ ತಂಡ ತಿರುಗಾಟ ಮಾಡುವ ವ್ಯಾಪ್ತಿಯಲ್ಲಿನ ಸಂಘಟನೆಗೆ ತಿರುಗಾಟ ಮಾಡದಂತೆ ಮಾಹಿತಿ ನೀಡಲಾಗುವುದು.
  9. ವಿಸೂ ತಂಡದ ಒಂದು ದಿನದ ಸಂಗ್ರಹವನ್ನು ಒಕ್ಕೂಟದ ಕಲಾವಿದರ ಹಿತಚಿಂತನೆಗಾಗಿ ನಿಧಿಗೆ ಅರ್ಪಿಸುವುದು ಒಕ್ಕೂಟದ ಜಂಟಿ ಹೆಸರಲ್ಲಿ ಉಳಿತಾಯ ಖಾತೆ ತೆರೆಯುವುದು.
  10. ತಿರುಗಾಟದ ಕೊನೆಗೆ ಎಲ್ಲಾ ಲೆಕ್ಕಾಚಾರ ಚುಕ್ತ ಮಾಡಬೇಕು. ಚುಕ್ತ ಆದ ಬಗ್ಗೆ ಕಲಾವಿದರಿಂದ ಸಹಿ ಪಡೆದ ಪತ್ರ ಪಡೆಯಬೇಕು.
  11. ಕ್ಷೇತ್ರದಿಂದ ತಂದ ಕಾಣಿಕೆ ಡಬ್ಬಿಯನ್ನು ಮತ್ತೆ ಕ್ಷೇತ್ರಕ್ಕೆ ತಲುಪಿಸಿ ಅದರಲ್ಲಿ ಸಂಗ್ರಹವಾದ ಮೊತ್ತವನ್ನು ನೀಡಿ ಅಧಿಕೃತ ರಶೀದಿಯ ಪತ್ರಿಯನ್ನು ಪಡೆದು ಒಕ್ಕೂಟಕ್ಕೆ ತಲುಪಿಸುವುದು.
  12. ಸಂಭಾವಣೆ ನಿರ್ಧಾರ ತಿರುಗಾಟಕ್ಕಿಂತ ಮೊದಲೇ ಮಾಡಿರಬೇಕು ಒಪ್ಪಂದ ಪತ್ರಕ್ಕೆ ಸಹಿ ಪಡೆದಿರಬೇಕು ಕಳೆದ ವಾರದ(ಒಂದು ವಾರದ ಸಂಭಾವಣೆಯನ್ನು ಸಂಘಟಕ ಇಟ್ಟುಕೊಳ್ಳಬಹುದು ಬಟ್ಟಾಡೆ ಈ ವಾರ ಮಾಡಬೇಕು.
  13. ಬೇರೆ ತಂಡದ ಕಲಾವಿದರನ್ನು ತಿರುಗಾಟದ ಮಧ್ಯದಲ್ಲಿ ತಮ್ಮ ತಂಡಕ್ಕೆ ಬಳಸಿಕೊಳ್ಳಬಾರದು.
  14. ತಿರುಗಾಟದ ಮಧ್ಯೆ ಯಾವುದೇ ರೀತಿಯ ಅಡಚಣೆಯಾದಲ್ಲಿ ತಕ್ಷಣ ಒಕ್ಕೂಟಕ್ಕೆ ಮಾಹಿತಿ ನೀಡುವುದು.
    ಪ್ರತಿ ಮನೆಯವರು ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಅವಕಾಶ ಮಾಡಿ ಕೊಟ್ಟು ವ್ಯವಸಾಯಿ ಕಲಾವಿದರ ಬದುಕು ಹಸನಾಗುವಲ್ಲಿ ನಿಮ್ಮ ಸಹಕಾರವನ್ನು ಒಕ್ಕೂಟದ ಪರವಾಗಿ ಯಾಚಿಸುತ್ತಿದ್ದೇವೆ.
  15. ಒಂದೇ ಊರಿನಲ್ಲಿ ಎರಡೆರಡು ತಂಡ ಮನೆಗೆ ಭೇಟಿ ನೀಡುವಂತಿಲ್ಲ. ಇನ್ನೊಂದು ತಂಡ ನಿಮ್ಮಲ್ಲಿಗೆ ಬಂದರೆ ಅವಕಾಶ ಕೊಡಬಾರದು
  16. ನಿಗದಿತ ಸಮಯ (ರಾತ್ರಿ 10.30) ದಿನದ ಮುಕ್ತಾಯಗೊಳ್ಳಬೇಕು
  17. ತಂಡದಿಂದ ಅನಪೇಕ್ಷಿತ ಘಟನೆ ನಡೆದರೆ ಒಕ್ಕೂಟಕ್ಕೆ ಮನೆಯವರು ದೂರು ನೀಡಬಹುದು.
  18. ವ್ಯವಸಾಯ ಮಾಡುತ್ತಿರುವ ಕಲಾವಿದರ ತಂಡಕ್ಕೆ ಬಹುತೇಕ ಒಕ್ಕೂಟ ಪರವಾನಿಗೆ ನೀಡುತ್ತದೆ.
  19. ಒಕ್ಕೂಟದ ಪದಾಧಿಕಾರಿಗಳು ಯಾವುದೇ ಚಿಕ್ಕ ಮೇಳದ ಫಲಾನುಭವಿಗಳು ಅಲ್ಲ
  20. ಚಿಕ್ಕ ಮೇಳಗಳ ತಿರುಗಾಟದಲ್ಲಿ ಸಂಗ್ರಹ ಆದ ಸಂಪಾದನೆಯ ಒಂದು ಭಾಗ ಚಿಕ್ಕಮೇಳದ ಕಲಾವಿದರ ಸಂಕಷ್ಟ ನಿಧಿಯಾಗಿ ಠೇವಣಿ ಇಡಲಾಗುವುದು.
    ಅನಪೇಕ್ಷಿತವಾಗಿ ಯಕ್ಷಗಾನದ ವೇಷಭೂಷಣಗಳ ಬಳಕೆ ನಿಷೇಧಕ್ಕೆ ಆಗ್ರಹ:
    ಹಿಂದೂ ಹಬ್ಬಗಳ ಸಂದರ್ಭ ಯಕ್ಷಗಾನ ವೇದಿಕೆಯ ಪ್ರದರ್ಶನ ಹೊರತುಪಡಿಸಿದ ಇತರ ಕಾರ್ಯಕ್ರಮಗಳಲ್ಲಿ ನವರಾತ್ರಿ, ದಸರ, ಗಣೇಶೋತ್ಸವ, ಅಷ್ಟಮಿ ಸಂದರ್ಭಗಳಲ್ಲಿ ಯಕ್ಷಗಾನದ ವೇಷಭೂಷಣ ಧಾರಣೆ ಮಾಡಿ ಬಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಉಲ್ಲಂಘನೆ ಮಾಡಿದರೆ ಸಾರ್ವಜನಿಕರು, ಕಲಾಭಿಮಾನಿಗಳು ಅಂತಹ ವೇಷಭೂಷಣಗಳನ್ನು ದಾರಣೆ ಮಾಡಿದ ವೇಷಧಾರಿಗಳನ್ನು ತಡೆದು ನಿಲ್ಲಿಸಿ ಸ್ಥಳೀಯ ಆರಕ್ಷಕ ಠಾಣೆಗೆ ತಿಳಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ. ಅಲ್ಲದೇ ಅವರಿಗೆ ಬಣ್ಣಹಚ್ಚಿ ವೇಷ ಭೂಷಣ ಬಾಡಿಗೆಗೆ ನೀಡುವವರು ಕೂಡಾ ಕಲೆಯ ಗೌರವ ಉಳಿಸುವುದಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಸಮಿತಿ ವಿನಂತಿಸಿದೆ.
    ಈಗಾಗಲೇ ಹಿಂದೂ ಸಂಘಟನೆಯವರು ಈ ಉದ್ದೇಶಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.
    ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ದ.ಕ ಜಿಲ್ಲೆ ಕೇಂದ್ರ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಉಪಾಧ್ಯಕ್ಷರು ರಮೇಶ ಕುಲಶೇಖರ, ಮೋಹನ ಕಲಂಬಾಡಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಕಾರ್ಯದರ್ಶಿ ದಿವಾಕರ ದಾಸ್ ಶೃತಿ ಆಟ್ಸ್, ಜತೆಕಾರ್ಯದರ್ಶಿ ಕಡಬ ದಿನೇಶ ರೈ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here