ಉಡುಪಿ: ಎಲ್ ಪಿಜಿ ಸಿಲಿಂಡರ್ ಅಭಾವವಿರುವುದನ್ನೇ ಬಂಡವಾಳ ಮಡಿಕೊಂಡಿರುವ ಸೈಬರ್ ವಂಚಕರು ಕೆವೈಸಿ ಹೆಸರಲ್ಲಿ ಲಕ್ಷ ಲಕ್ಷ ದೋಚಿರುವ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಹೆಸರಲ್ಲಿ ಇಬ್ಬರಿಗೆ ಲಕ್ಷ ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಎಸ್ ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಕೆವೈಸಿ ಅಪ್ ಡೇಟ್ ಮಾಡುವಂತೆ ಗ್ಯಾಸ್ ಏಜೆನ್ಸಿ ಹೆಸರಲ್ಲಿ ಅಪರಿಚಿತ ನಂಬರ್ ನಿಂದ ಕರೆ ಮಾಡಿ ಬಳಿಕ ವಾಟ್ಸಾಪ್ ಗೆ ಎಪಿಕೆ ಫೈಲ್ ಕಳುಹಿಸಿ ಫೈಲ್ ಡೌನ್ ಲೋಡ್ ಮಾಡುವಂತೆ ಹೇಳಿದ್ದಾರೆ. ಹೀಗೆ ಡೌನ್ ಲೋಡ್ ಮಾಡುತ್ತಿದ್ದಂತೆ ಫೋನ್ ಹ್ಯಾಕ್ ಆಗಿದ್ದು, ವಂಚಕರು ಬ್ಯಾಂಕ್ ವಿವರಗಳನ್ನು ಪಡೆದು ಅಕೌಂಟ್ ನಲ್ಲಿದ್ದ ಹಣವನ್ನು ದೋಚಿಸದ್ದಾರೆ. ಇದೇ ರೀತಿ ಇಬ್ಬರಿಗೆ ವಂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ಪ್ರಕರಣದಲ್ಲಿ 1.5 ಲಕ್ಷ ವಂಚನೆಯಾಗಿದೆ. ಮತ್ತೊಂದು ಕೇಸ್ ನಲ್ಲಿ 6 ಲಕ್ಷ ರೂಪಾಯಿ ವಂಚನೆಯಾಗಿದೆ. ಬೇಗ ಸಿಲಿಂಡರ್ ಕೊಡುತ್ತೇವೆ. ಹಳೆಯ ರೇಟಿನಲ್ಲಿಯೇ ಸಿಲಿಂಡರ್ ಲಭ್ಯ ಎಂದು ನಕಲಿ ವೆಬ್ ಸೈಟ್ ಮೂಲಕ ವಂಚಿಸುತ್ತಿದ್ದಾರೆ. ಕೆವೈಸಿ ಬಗ್ಗೆ ಯಾವುದೇ ಗಡಿಬಿಡಿ ಬೇಡ. ಸರ್ಕಾರ ಯಾವುದೇ ಹೊಸ ಆದೇಶ ಮಾಡಿಲ್ಲ. ಈ ಹಿಂದಿನ ಆದೇಶವೇ ಜಾರಿಯಲ್ಲಿದೆ. ಎಪಿಕೆ ಫೈಲ್ ಕ್ಲಿಕ್ಕಿಸುವ ಮುನ್ನ ಎಚ್ಚರವಿರಲಿ ಎಂದು ತಿಳಿಸಿದ್ದಾರೆ.
ವಂಚನೆಗೊಳಗಾದವರು ಒಂದುಗಂಟೆಯ ಗೋಲ್ಡನ್ ಅವರ್ ನಲ್ಲಿ ಹೇಳಿದರೆ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇಲ್ಲವಾದಲ್ಲಿ ಸೈಬರ್ ಕ್ರೈಂ ಟ್ರೇಸ್ ಮಾಡುವುದು ಸವಾಲಾಗುತ್ತದೆ ಎಂದಿದ್ದಾರೆ.

