ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ 66ನೇ ರಾಷ್ಟ್ರೀಯ ಹೆದ್ದಾರಿಯ ಉದ್ದೂರು ಕೆಜಿ ರೋಡ್ ಸಮೀಪದ ಅಪಾಯಕಾರಿ ತಿರುವು ಮತ್ತೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ತಿರುವಿನಲ್ಲಿ ದಿನನಿತ್ಯ ಸಂಭವಿಸುತ್ತಿರುವ ಅಪಘಾತಗಳು ಹಲವು ಜೀವಹಾನಿಗೆ ದಾರಿ ಮಾಡಿಕೊಟ್ಟಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ ಅವರು ಪ್ರಧಾನ ಮಂತ್ರಿಗಳ ಕಚೇರಿಗೆ ಮನವಿ ಸಲ್ಲಿಸಿ, ಈ ಅಪಾಯಕಾರಿ ತಿರುವನ್ನು ತಕ್ಷಣ ಸರಿಪಡಿಸುವಂತೆ ಹಾಗೂ ಪರ್ಯಾಯವಾಗಿ ಸುರಕ್ಷಿತ ಜಂಕ್ಷನ್ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳೀಯರ ಪ್ರಕಾರ, ಉಳ್ಳೂರು ಮತ್ತು ಹಾವಂಜೆ-ಕುಕ್ಕೆಹಳ್ಳಿ ಭಾಗದ ಜನರು ಬ್ರಹ್ಮಾವರ ತಾಲೂಕು ಕಚೇರಿಗೆ ತೆರಳಲು ಸಂಪತಕಟ್ಟೆ ಜಂಕ್ಷನ್ ಮೂಲಕವೇ ಹೆದ್ದಾರಿಯನ್ನು ಸಂಪರ್ಕಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಅನೇಕರು ಅನಿವಾರ್ಯವಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವಂತಾಗಿ, ಅಪಘಾತಗಳ ಸಂಭವ ಹೆಚ್ಚುತ್ತಿದೆ.
ಇದೇ ಮಾರ್ಗವು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹತ್ತಿರದ ಸಂಪರ್ಕ ರಸ್ತೆಯಾಗಿದ್ದು, ಕುಂದಾಪುರ, ಬೈಂದೂರು ಭಾಗಗಳಿಂದ ಬರುವವರು ಕೆಜಿ ರೋಡ್ ಮೂಲಕ ಪೆರ್ಡೂರು ರಸ್ತೆಗೆ ಸಂಪರ್ಕ ಸಾಧಿಸುತ್ತಾರೆ. ಆದರೆ ಸರಿಯಾದ ವ್ಯವಸ್ಥೆಗಳ ಕೊರತೆಯಿಂದ ಸಂಚಾರ ದುಸ್ತರವಾಗಿದೆ.
ಕೆಜಿ ರೋಡ್ ಮೂಲಕ ಚೆರ್ಡೂರು ಹಾಗೂ ಆಗುಂಬೆ ಕಡೆಗೆ ಅಥವಾ ಬ್ರಹ್ಮಾವರದತ್ತ ತೆರಳುವವರಿಗೂ ಇದೇ ಸಮಸ್ಯೆ ಎದುರಾಗುತ್ತಿದ್ದು, ಜನರು ಬಲವಂತವಾಗಿ ರಾಂಗ್ ಸೈಡ್ನಲ್ಲಿ ಸಂಚರಿಸುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಪ್ರದೇಶದಲ್ಲಿ ಹೈಸ್ಕೂಲ್, ಐಟಿಐ ಕಾಲೇಜು, ಆಸ್ಪತ್ರೆ, ದೇವಸ್ಥಾನ, ಚರ್ಚ್ ಹಾಗೂ ಆಶ್ರಮ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಇದ್ದು, ದಿನನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಜೀವ ಭದ್ರತೆ ಗಂಭೀರವಾಗಿ ಪ್ರಶ್ನಾರ್ಹವಾಗಿದೆ.
ಪ್ರತಿ ಬಾರಿ ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಜಾರಿಗೆ ತರುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಶೇಷವಾಗಿ, ಇಲ್ಲಿ ಸರ್ವಿಸ್ ರೋಡ್ ನಿರ್ಮಿಸಿ ರಾಂಗ್ ಸೈಡ್ ಸಂಚಾರಕ್ಕೆ ತೆರೆ ಬೀಳಿಸುವುದರ ಜೊತೆಗೆ, ರಾಷ್ಟ್ರೀಯ ಹೆದ್ದಾರಿ 66ರಿಂದ ಕೆಜಿ ರೋಡ್ ಹಾಗೂ ಪೆರ್ಡೂರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಫ್ಲೈಓವರ್ ನಿರ್ಮಾಣ ಮಾಡುವಂತೆ ಆಗ್ರಹಿಸಲಾಗಿದೆ.

