ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರ್ಯಾಪಿಡೋ ಚಾಲಕನ ಸೋಗಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ತಿಲಕನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಈತ, ಕದ್ದ ಹಣದಲ್ಲಿ ಪ್ರೇಯಸಿಯೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನುವ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ. ಬಂಧಿತನಿಂದ ₹35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಡ್ಯ ಜಿಲ್ಲೆ ಹೊಸಹಳ್ಳಿ ಗ್ರಾಮದ ಮೂಲದವನಾದ ನಾಗರಾಜ್ ಬಂಧಿತ ಆರೋಪಿ. ಈತ ರಾಮಮೂರ್ತಿ ನಗರದ ನಿವಾಸಿಯಾಗಿದ್ದ.ನಗರದಲ್ಲಿ ರ್ಯಾಪಿಡೋ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ, ರೈಡ್ ನೆಪದಲ್ಲಿ ಸಂಚರಿಸುವಾಗ ಯಾವ ಮನೆಗಳಿಗೆ ಬೀಗ ಹಾಕಲಾಗಿದೆ ಎಂಬುದನ್ನು ಗಮನಿಸುತ್ತಿದ್ದ.ಮನೆಯ ಗೇಟ್ಗೆ ಹೊರಗಿನಿಂದ ಲಾಕ್ ಹಾಕಿರುವ ಮನೆಗಳೇ ಈತನ ಪ್ರಮುಖ ಟಾರ್ಗೆಟ್. ಯಾರೂ ಇಲ್ಲದ ಸಮಯ ನೋಡಿ ಕ್ಷಣಾರ್ಧದಲ್ಲಿ ಕಳ್ಳತನ ಎಸಗುತ್ತಿದ್ದ.
ಆರೋಪಿಯಿಂದ 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್ ಸೇರಿದಂತೆ ಒಟ್ಟು ₹35 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಮಾಡಿದ ಹಣದಲ್ಲಿ ತನ್ನ ಪ್ರೇಯಸಿಯೊಂದಿಗೆ ಮಂಡ್ಯದಲ್ಲಿ ‘ಲಿವಿಂಗ್ ಟುಗೆದರ್’ ಜೀವನ ನಡೆಸುತ್ತಿದ್ದ ಮತ್ತು ಐಷಾರಾಮಿ ಮೋಜು-ಮಸ್ತಿ ಮಾಡುತ್ತಿದ್ದ.
ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ಮನೆಯವರು ದಿನಸಿ ತರಲು ಹೋದ ಕೆಲವೇ ಹೊತ್ತಿನಲ್ಲಿ ನಾಗರಾಜ್ ಕನ್ನ ಹಾಕಿದ್ದ. ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿದ ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡ ಆರೋಪಿಯನ್ನು ಸಿನಿಮೀಯ ಮಾದರಿಯಲ್ಲಿ ಬಂಧಿಸಿದೆ. ಈತನ ವಿರುದ್ಧ ಈಗಾಗಲೇ ರಾಮಮೂರ್ತಿ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

