ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್, ಪುತ್ತೂರು ಸಂಸ್ಥೆಯ ನೂತನ ವಾಚ್ ಕಲೆಕ್ಷನ್ ಶುಭಾರಂಭದ ಸಂಭ್ರಮದ ಅಂಗವಾಗಿ, ಎನ್ಎಂಎಂಎಸ್ (NMMS) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕು. ಲಿಖಿತಾ.ಕೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪುತ್ತೂರು ತಾಲೂಕಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಒಡ್ಯ ಶಾಲೆಯ ವಿದ್ಯಾರ್ಥಿನಿಯಾಗಿರುವ ಲಿಖಿತಾ.ಕೆ ಅವರು ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿದ್ದ ಸೀಮಿತ ಸೌಲಭ್ಯಗಳ ನಡುವೆಯೂ ಶಾಲೆಯ ಶಿಕ್ಷಕರ ಮಾರ್ಗದರ್ಶನ ಹಾಗೂ ತಮ್ಮ ಸ್ವಂತ ಪರಿಶ್ರಮದ ಮೂಲಕ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ.
ವಿದ್ಯಾರ್ಥಿನಿಯ ಈ ಅಪೂರ್ವ ಸಾಧನೆಯನ್ನು ಗುರುತಿಸಿದ ಮುಳಿಯ ಗೋಲ್ಡ್ & ಡೈಮಂಡ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವು ಅವರನ್ನು ಸಂಸ್ಥೆಗೆ ಆಹ್ವಾನಿಸಿ, ಪ್ರೋತ್ಸಾಹ ಧನ, ವಿಶೇಷ ಉಡುಗೊರೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ, ಮುಂದಿನ ಶಿಕ್ಷಣ ಜೀವನದಲ್ಲೂ ಇನ್ನಷ್ಟು ಉನ್ನತ ಸಾಧನೆಗಳತ್ತ ಹೆಜ್ಜೆ ಇಡಲು ಶುಭ ಹಾರೈಸಲಾಯಿತು.
ಈ ಸನ್ಮಾನವು ವಿದ್ಯಾರ್ಥಿನಿ ಲಿಖಿತಾ ಅವರಿಗೆ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಪ್ರೇರಣೆಯಾಗಿದೆ. ಅಲ್ಲದೆ, ಒಡ್ಯ ಸರ್ಕಾರಿ ಶಾಲೆಗೆ ಹಾಗೂ ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ.
ಪರಿಶ್ರಮಕ್ಕೆ ಸಿಕ್ಕ ಗೌರವ; ಗ್ರಾಮೀಣ ವಿದ್ಯಾರ್ಥಿನಿಯ ಸಾಧನೆಗೆ ಸಾರ್ವಜನಿಕರ ಮೆಚ್ಚುಗೆ
ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿನಿಯೊಬ್ಬಳು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿ, ಖಾಸಗಿ ಸಂಸ್ಥೆಯಿಂದ ಗೌರವ ಸನ್ಮಾನ ಪಡೆಯುತ್ತಿರುವುದು ಇತರ ವಿದ್ಯಾರ್ಥಿಗಳಿಗೂ ಸ್ಪೂರ್ತಿದಾಯಕವಾಗಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಪ್ರೋತ್ಸಾಹಿಸುವ ಸಮಾಜಮುಖಿ ಕಾರ್ಯಕ್ಕೆ ಮುಳಿಯ ಗೋಲ್ಡ್ & ಡೈಮಂಡ್ ಸಂಸ್ಥೆ ಮೆಚ್ಚುಗೆಗೆ ಪಾತ್ರವಾಗಿದೆ.

