ಮೂಡುಬಿದಿರೆ : ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ವಿಶೇಷವಾಗಿ ಅಪರಾಧ ಪತ್ತೆ ವಿಭಾಗದಲ್ಲಿ ಗಮನಾರ್ಹ ಕಾರ್ಯಕ್ಷಮತೆ ತೋರಿದ್ದ ಎಂಟು ಮಂದಿ ಪೊಲೀಸ್ ಸಿಬ್ಬಂದಿಗೆ ವರ್ಗಾವಣೆಯ ಆದೇಶ ಹೊರಡಿಸಲಾಗಿದೆ.
ಅಪರಾಧ ಪ್ರಕರಣಗಳ ತನಿಖೆ ಹಾಗೂ ಪತ್ತೆ ಕಾರ್ಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಸ್ಥಳೀಯ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವು ಪ್ರಮುಖ ಪ್ರಕರಣಗಳ ಭೇದನೆಯಲ್ಲಿ ಪಾತ್ರವಹಿಸಿದ್ದ ಸಿಬ್ಬಂದಿಯನ್ನು ವಿವಿಧ ಠಾಣೆಗಳಿಗೆ ನಿಯೋಜಿಸಲಾಗಿದೆ.
ವರ್ಗಾವಣೆಗೊಂಡ ಸಿಬ್ಬಂದಿಗಳ ಪೈಕಿ ಅಖಿಲ್ ಅಹಮದ್ ಅವರನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ, ಮುಹಮ್ಮದ್ ಹುಸೈನ್ ಅವರನ್ನು ಕದ್ರಿ ಪೊಲೀಸ್ ಠಾಣೆಗೆ, ಪ್ರದೀಪ್ ಕುಮಾರ್ ಅವರನ್ನು ಸುರತ್ಕಲ್ ಪೊಲೀಸ್ ಠಾಣೆಗೆ, ಪ್ರದೀಪ್ ಕುಲಾಲ್ ಅವರನ್ನು ಮೂಲ್ಕಿ ಪೊಲೀಸ್ ಠಾಣೆಗೆ, ಅರುಣ್ ಅವರನ್ನು ಉಳ್ಳಾಲ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಅಯ್ಯಪ್ಪ, ಸುರೇಶ್ ಹಾಗೂ ಧರ್ಮಣ ಅವರನ್ನು ಬಜ್ಪೆ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ.

