ಬಂಟ್ವಾಳ: ಕೇಂದ್ರ ಸರ್ಕಾರದ ಅಮೃತ ಭಾರತ್ ಯೋಜನೆಯಡಿ ರೂ ೨೮.೪೯ ಕೋಟಿ ವೆಚ್ಚದಲ್ಲಿ ಇಲ್ಲಿನ ಬಿ.ಸಿ.ರೋಡು ರೈಲ್ವೆ ನಿಲ್ದಾಣ ಪುನರ್ ನಿರ್ಮಾಣಗೊಂಡು ಹೊಸ ರೂಪ ಪಡೆದುಕೊಂಡಿದೆ.
ಕಳೆದ ೨೦೨೪ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಅಂದಿನ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅಂದು ನಿಲ್ದಾಣದಲ್ಲಿ ಸಾಕ್ಷಿಯಾಗಿದ್ದರು. ಈಗಾಗಲೇ ಪ್ರಯಾಣಿಕರ ಬಹು ಬೇಡಿಕೆಯ ಪಾದಚಾರಿಗಳಿಗೆ ಮೇಲ್ಸೇತುವೆ ನಿರ್ಮಾಣಗೊಂಡಿದ್ದು, ವಾಹನ ನಿಲುಗಡೆಗೆ ಶೆಲ್ಟರ್, ಆಕರ್ಷಕ ಗಾರ್ಡನ್, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಗೊಂಡಿದೆ. ಈ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಸಂಬಂಧಪಟ್ಟ ಎಂಜಿನಿಯರ್ ಮತ್ತಿತರ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಈ ಹಿಂದೆ ಸಣ್ಣ ಗೂಡಿನಂತಿದ್ದ ಮುಂಗಡ ಟಿಕೆಟ್ ಕಾಯ್ದಿರಿಸುವ ಸ್ಥಳ ವಿಸ್ತಾರಗೊಂಡು ಹೊಸ ರೂಪ ಪಡೆದುಕೊಂಡಿದೆ.
ವಿಶೇಷತೆ: ಒಂದು ಕ್ಯಾಂಟೀನ್ ಸಹಿತ ನಾಲ್ಕು ಕ್ಯಾಟರಿಂಗ್ ಸ್ಟಾಲ್, ಗ್ರಾನೈಟ್ ನೆಲಹಾಸು ಮತ್ತು ಕೆಲವೆಡೆ ಟೈಲ್ಸ್ ಅಳವಡಿಕೆ, ಪ್ಲಾಟ್ ಫಾರ್ಮ್ ಉದ್ದಕ್ಕೂ ಶೆಲ್ಟರ್ ನಿರ್ಮಾಣ, ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ, ಎಲ್.ಇ.ಡಿ. ಪರದೆ ಮೇಲೆ ರೈಲು ಓಡಾಟದ ಸಮಯ ಮತ್ತಿತರ ಬಗ್ಗೆ ಮಾಹಿತಿ ಸಿಗಲಿದೆ. ಈಗಾಗಲೇ ವಿದ್ಯುತ್ ರೈಲು ಓಡಾಟಕ್ಕೆ ಸಂಬಂಧಿಸಿದಂತೆ ವಿದ್ಯುದೀಕರಣ ಕಾಮಗಾರಿಯೂ ನಡೆದಿದೆ. ಒಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಹೈಟಕ್ ರೈಲ್ವೆ ನಿಲ್ದಾಣದ ನಿರೀಕ್ಷೆಯಲ್ಲಿದ್ದ ಇಲ್ಲಿನ ಜನತೆಗೆ ರೈಲ್ವೆ ನಿಲ್ದಾಣ ಸುಂದರೀಕರಣಗೊಂಡಿರುವುದು ಸಂತಸ ತಂದಿದೆ.
-ಮೋಹನ್ ಕೆ.ಶ್ರೀಯಾನ್ ರಾಯಿ

