ಜಾತಿ ನಿಂದನೆ ಕೇಸ್‌ಗೆ ಹೆದರಿ ಪುತ್ರ ಆತ್ಮಹತ್ಯೆ: ಸುದ್ದಿ ತಿಳಿದು ಹೃದಯಾಘಾತದಿಂದ ತಂದೆ ಕೂಡ ಸಾವು

0
118

ಯಾದಗಿರಿ: ಜಾತಿ ನಿಂದನೆ ಕೇಸ್​ಗೆ ಹೆದರಿ ಮಗ ಆತ್ಮಹತ್ಯೆ ಮಾಡಿಕೊಂಡರೆ, ಮಗನ ಸಾವಿನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ  ಘಟನೆ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ನಡೆದಿದೆ. ಮರಕ್ಕೆ ನೇಣುಬಿಗಿದುಕೊಂಡು ಮೆಹಬೂಬ್ (22) ಆತ್ಮಹತ್ಯೆಗೆ ಶರಣಾಗಿದ್ದು, ಹೃದಯಾಘಾತದಿಂದ ತಂದೆ ಸೈಯದ್ ಅಲಿ(50) ಸಾವನ್ನಪ್ಪಿದ್ದಾರೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ನಡೆದದ್ದೇನು?

ಬೇರೆಯವರ ಜಮೀನಿನ ಮೂಲಕ ತನ್ನ ಜಮೀನಿಗೆ ನಡೆದುಕೊಂಡು ಹೋಗುವ ವಿಚಾರವಾಗಿ ಕಳೆದ ಒಂದು ವಾರದ ಹಿಂದೆ ವಡಗೇರ ಪಟ್ಟಣದ ದಲಿತ ಕುಟುಂಬದ ಜೊತೆ ಜಗಳ ಉಂಟಾಗಿತ್ತು. ಜಗಳದ ಬಳಿಕ ಹಿರಿಯರು ಕುಳಿತು ನ್ಯಾಯ ಪಂಚಾಯತಿ ಮಾಡಿ‌ ಬಗೆ ಹರಿಸಿದ್ದರು. ಆದರೆ ಬೇರೆ ಊರಿಂದ‌ ಬಂದ ದಲಿತ ಮುಖಂಡ ಓರ್ವ ಜಾತಿ‌ ನಿಂದನೆ ಕೇಸ್ ದಾಖಲು ಮಾಡಿ, ಜೈಲಿಗೆ ಕಳುಹಿಸುತ್ತೇನೆ ಅಂತ ಮೆಹಬೂಬ್​ಗೆ ಬೆದರಿಕೆ ಹಾಕಿದ್ದರು.

ಕೇಸ್ ದಾಖಲಾದರೆ ಮರ್ಯಾದೆ ಹೋಗುತ್ತೆ, ಜೈಲಿಗೆ ಹೋಗಬೇಕಾಗುತ್ತೆ ಅಂತ ಮೆಹಬೂಬ್​ ಹೆದರಿದ್ದಾನೆ. ಇದೆ ಕಾರಣಕ್ಕೆ ಬುಧವಾರದಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಮಗನ ಆತ್ಮಹತ್ಯೆ ಸುದ್ದಿ ತಿಳಿದು ಶಾಕ್​ಗೆ ಒಳಗಾದ ತಂದೆಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸೈಯದ್ ಸಲಿ ಕೂಡ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here