ಬಂಟ್ವಾಳ : ಪರಿಸರದಿಂದಲೇ ನಮ್ಮ ಬದುಕು ಇರುವುದರಿಂದ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವವು ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಬೆಳೆಯಬೇಕು,
ಅದೇ ರೀತಿ ಪ್ಲಾಸ್ಟಿಕ್ ಎಂಬುದು ಒಂದು ಮಾರಕ ವಸ್ತು ಇದರಿಂದ ಪರಿಸರವು ಹಾಳಾಗುತ್ತಿದೆ, ಪ್ಲಾಸ್ಟಿಕ್ ಅನ್ನು ಪರಿಸರಕ್ಕೆ ಬಿಸಾಡದೇ ಮರುಬಳಕೆ ಮಾಡುವುದರಿಂದ ಅದರ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ, ಪರಿಸರವು ಕೇವಲ ಮಾನವನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳ ಆವಾಸಸ್ಥಾನ ಆಗಿರುವುದರಿಂದ ವಿವಿಧ ರೀತಿಯ ಹಣ್ಣಿನ ಮರಗಳನ್ನು ಬೆಳೆಸುವುದರಿಂದ ನಾವು ನಿಸರ್ಗಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ ಎಂಬುದಾಗಿ ಲಯನ್ಸ್ ಕ್ಲಬ್ ನ ವಲಯಾಧ್ಯಕ್ಷ ನೋಯಲ್ ಲೋಬೋ ಹೇಳಿದರು.
ಅವರು ಶನಿವಾರ ಲಯನ್ಸ್ ಕ್ಲಬ್ ಅಮ್ಟೂರು ವತಿಯಿಂದ ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಮೊದಲು ಶಾಲಾ ಆವರಣದಲ್ಲಿ ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಣ್ಣಿನ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ತಮ್ಮ ತಮ್ಮ ಮನೆಯಲ್ಲಿ ನೆಟ್ಟು ಬೆಳೆಸಲು ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಮ್ಟೂರು ಲಯನ್ಸ್ ಕ್ಲಬ್ ಉಪಾಧ್ಯಕ್ಷ
ವಿಲಿಯನ್ ಪೀರೇರಾ, ಸದಸ್ಯರಾದ ನವೀನ್ ಡಿಕುನ್ನ, ಜೇಮ್ಸ್ ಮಾರ್ಟಿಸ್, ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಹಿರಿಯ ಶಿಕ್ಷಕಿ ಶಕುಂತಳಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ಸ್ವಾಗತಿಸಿ, ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು