ಹಾಸನ: ತಿದ್ದಿಬುದ್ದಿ ಹೇಳಬೇಕಾದ ಶಿಕ್ಷಕಿ 1ನೇ ತರಗತಿಯ ಪುಟ್ಟ ವಿದ್ಯಾರ್ಥಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮಕ್ಕಳು ಮಾಡೋ ಸಣ್ಣ-ಪುಟ್ಟ ತಪ್ಪಿಗೆ ಅವರಿಗೆ ಮನಸೋ ಇಚ್ಛೆ ಥಳಿಸೋದು ಎಷ್ಟು ಸರಿ ಅನ್ನೋ ಪ್ರಶ್ನೆ ಮೂಡಿದೆ. ಹಾಸನದ ಖಾಸಗಿ ಶಾಲೆ ಶಿಕ್ಷಕಿ ಹೊಡೆದ ಏಟಿಗೆ ಬಾಲಕ ಆಸ್ಪತ್ರೆ ಸೇರುವಂತಾಗಿದೆ.
ಸಣ್ಣ ತಪ್ಪಿಗೆ ಇದೆಂಥಾ ಶಿಕ್ಷೆ?
ಖಾಸಗಿ ಶಾಲೆಯ ಶಿಕ್ಷಕಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ. ಬಾಲಕನಿಗೆ ಬಾಸುಂಡೆ ಬರುವಂತೆ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ ಎನ್ನಲಾಗ್ತಿದೆ. ಒಂದನೇ ತರಗತಿ ಓದುತ್ತಿರುವ ದಿವಾಕರ್ಗೌಡ ಎಂಬ ವಿದ್ಯಾರ್ಥಿಗೆ ಶಿಕ್ಷಕಿ ರಜನಿ ಹೊಡೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬಾಲಕನಿಗೆ ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪೊಲೀಸ್ ಠಾಣೆಗೆ ದೂರು ಸಿದ್ಧತೆ
ಶಿಕ್ಷಕಿಯಿಂದ ಥಳಿತಕ್ಕೊಳಗಾದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಕುರಿತು ಗಾಯಾಳು ಬಾಲಕನ ಪೋಷಕರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

