ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜೀರ್ಣೋದ್ದಾರ ಪ್ರಯುಕ್ತ ನಡೆಸಿದ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಗುರುವಾರ ಸಂಜೆ ಸಂಪನ್ನಗೊಂಡು ಶ್ರೀ ದೇಗುಲದ ಸಮಗ್ರ ಜೀರ್ಣೋದ್ದಾರಕ್ಕೆ ಶ್ರೀದೇವರಿಂದ ಅನುಜ್ಞೆ ಲಭ್ಯವಾಗಿದೆ.
ಶ್ರೀ ದೇವಳದ ಶ್ರೀ ಕಾಳಭೈರವ ದೇವದರ್ಶನದಲ್ಲಿ ನೀಡಿರುವ ಆದೇಶದಂತೆ ಶ್ರೀ ಕಾಶೀ ಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಅಷ್ಟ ಮಂಗಳ ಪ್ರಶ್ನೆಗೆ ವೇದಮೂರ್ತಿ ಬೇಳ ಪದ್ಮನಾಭ ಶರ್ಮರವರ ನೇತೃತ್ವದಲ್ಲಿ ಕಳೆದ ಐದು ದಿನಗಳ ಕಾಲ ನಡೆದು ಸಿಂಹ ರಾಶಿಯಲ್ಲಿ ಏಕಾದಶದಲ್ಲಿ ಗುರು ಮೂಡಿ ಈ ಅಪೂರ್ವ ಸಮಾಗಮದಲ್ಲಿ ಗ್ರಾಮದ ಅಭಿವೃದ್ಧಿಯ ಸಹಿತ ಕ್ಷೇತ್ರದ ಸಮಗ್ರ ಅಭಿವೃದ್ಧಿ ಯಾಗಲಿದೆ ಹಾಗೂ ಸೂಚಿಸಿದ ಕೆಲವು ಪರಿಹಾರ ನಡೆಸಿದಲ್ಲಿ ಬಹಳ ಸಂದರ ದೇವಾಲಯ ನಿರ್ಮಾಣಗೊಂಡು ಬಹು ವೈಭವದಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಗುರುವಾರ ನಡೆದ ಪ್ರಶ್ನಾ ಚಿಂತನೆಯಲ್ಲಿ ವೇದಮೂರ್ತಿ ಬೇಳ ಪದ್ಮನಾಭ ಶರ್ಮ ತಿಳಿಸಿದ್ದಾರೆ.
ಈ ಸಂದರ್ಭ ಚೊಟ್ಟನಿಕ್ಕಾರ ಅರಯನ್ಕಾವು ಹರಿದಾಸನ್ ನಂಬೂದರಿಪ್ಪಾಡ್, ವರಕಡ ಚೋರೋಡು ಶ್ರೀನಾಥ ಪಣಿಕ್ಕರ್, ಕಣ್ಣನೂರು ಎಡಕ್ಕಾಡು ದೇವಿದಾಸ ಗುರುಕ್ಕಳ್, ಕೃಷ್ಣ ಪ್ರಸಾದ ರಂಗಾ ಭಟ್ಟ, ಪ್ರವೀಣ್ ತಂತ್ರಿ ಮಟ್ಟು ಕಟಪಾಡಿ, ಮುರಳೀಧರ ತಂತ್ರಿ ಉಡುಪಿ, ವಾಸುದೇವ ಭಟ್ ಪಾವಂಜೆ ತಂಡವು ಅಷ್ಟ ಮಂಗಳ ಪ್ರಶ್ನಾ ಚಿಂತನೆಗೆ ಸಹಕಾರ ನೀಡಿದ್ದಾರೆ. ಈ ಸಂದರ್ಭ ಕ್ಷೇತ್ರದ ದೇವದರ್ಶನ ಪಾತ್ರಿ ಪಿ.ಸತ್ಯನಾರಾಯಣ ನಾಯಕ್, ಪರ್ಯಾಯ ಅರ್ಚಕ ಸಂಪಿಗೆ ಮನೆ ವಿಶ್ವನಾಥ ಭಟ್, ಶ್ರೀದೇವಳದ ಜೀರ್ಣೋದ್ದಾರ ಪುನರ್ಪ್ರತಿಷ್ಠಾಪನಾ ಸಮಿತಿಯ ಸದಸ್ಯರು, ಆಡಳಿತ ಸಮಿತಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

