ಮಂಗಳೂರು : ಮುಖ್ಯವಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಅನುಕೂಲವಾಗುವಂತೆ ಮಂಗಳೂರು ಮತ್ತು ಅಯೋಧ್ಯೆ ನಡವೆ ನೇರ ರೈಲು ಸಂಪರ್ಕ ಒದಗಿಸುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದ.ಕ. , ಉಡುಪಿ ಪ್ರದೇಶವು ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿ ಶ್ರೀಮಂತವಾದ ಪರಂಪರೆ ಹೊಂದಿದೆ. ಶ್ರದ್ಧೆ ಭಕ್ತಿಗೆ ಹೆಸರಾಗಿರುವ ಈ ನಾಡಿನಲ್ಲಿ ಭಜನಾ ಕಾರ್ಯಕ್ರಮ, ದೇವಾಲಯಗಳಲ್ಲಿ ಶ್ರೀರಾಮನನ್ನು ಭಜಿಸಲಾಗುತ್ತದೆ. ಅಯೋಧ್ಯೆಯ ಬಗ್ಗೆಯೂ ಇಲ್ಲಿನ ಜನರಿಗೆ ಅಪಾರ ಶ್ರದ್ದೆಯಿದೆ. ಆದ್ದರಿಂದ ಅಯೋಧ್ಯೆ ಸಂಪರ್ಕ ಸಂಬಂಧಿಸಿ ಈ ಭಾಗದ ಜನರ ಬೇಡಿಕೆ ಪರಿಗಣಿಸುವಂತೆ ಅವರು ಕೋರಿದರು.
ಬೆಂಗಳೂರು ಅಥವಾ ಇತರ ಮಾರ್ಗವಾಗಿ ಅಯೋಧ್ಯೆ ಸಾಗಲು 40 ಗಂಟೆಗಳನ್ನು ವ್ಯಯಿಸಬೇಕಾಗಿದೆ. ನೇರ ರೈಲು ಸಂಪರ್ಕ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಲಕ್ಷಾಂತರ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಲಿದೆ.