ಮುಲ್ಕಿ: ಮೂಡಬಿದ್ರೆ- ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗಕ್ಕೆ ಸಂಬಂಧಿಸಿ ಸ್ಥಳೀಯರ ಅಹವಾಲುಗಳನ್ನು ಚರ್ಚಿಸಲು ಕಿನ್ನಿಗೋಳಿ ಯುಗಪುರುಷದ ಸಭಾಭವನದಲ್ಲಿ ಮುಲ್ಕಿ -ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ವಿದ್ಯುತ್ ಲೈನ್ ಹಾದು ಹೋಗುವಾಗ ಜಾಗ ಕಳೆದುಕೊಳ್ಳುವ ಸ್ಥಳೀಯರ ಹಾಗೂ ಅಧಿಕಾರಿಗಳ ಸಭೆ ಸೋಮವಾರ ನಡೆಯಿತು.
ಸಭೆಯಲ್ಲಿ ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ದ ವಿದ್ಯುತ್ ಲೈನ್ ಕಾಮಗಾರಿ ನಡೆಸುವಾಗ , ತೋಟ ಹಾಗೂ ಕೃಷಿ ಕಾರ್ಯ ಸ್ಥಳದ ಯಜಮಾನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಸರಿಯಾಗಿ ಮಾಹಿತಿ ಮತ್ತು ಪರಿಹಾರ ನೀಡದೆ ಪೊಲೀಸ್ ಬಲ ಬಳಸಿ ಹೆದರಿಸಿ ಬೆದರಿಸಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಕಾಮಗಾರಿಯ ಪ್ರಾಜೆಕ್ಟ್ ಮ್ಯಾನೇಜರ್ ವೆಂಕಟೇಶ್ ಸಬೂಬು ಹೇಳಲು ಯತ್ನಿಸಿದಾಗ ಆಕ್ರೋಶಗೊಂಡ ಕೃಷಿಕರು, ಜಾಗದ ಮಾಲೀಕರು ಕಾಮಗಾರಿ ಹಾಗೂ ಪರಿಹಾರ ನೀಡುವ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ ಕೂಡಲೇ ಶಾಸಕರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಶಾಸಕರು ಕೃಷಿಕರನ್ನು ಸಮಾಧಾನಗೊಳಿಸಿ ಮಾತನಾಡಿ, ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಗೆ ಸ್ಥಳೀಯರ ಯಾವುದೇ ವಿರೋಧ ಇಲ್ಲ ,ಆದರೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿ ನಿಯಮಗಳ ಪಾಲನೆ ಮಾಡಿ, ಜಾಗ ಕಳೆದುಕೊಳ್ಳುವವರಿಗೆ ಸರಿಯಾದ ಪರಿಹಾರ ನೀಡಿ ಕಾಮಗಾರಿ ನಡೆಸಬೇಕು ಜಾಗದ ವ್ಯಾಜ್ಯವಿದ್ದರೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ, ಗಮನಕ್ಕೆ ತರಬೇಕು, ಪೊಲೀಸರನ್ನು ಕರೆಸಿ ಹೆದರಿಸಿ ಬೆದರಿಸಿ ಬಲಾತ್ಕಾರದ ಕಾಮಗಾರಿಗೆ ವಿರೋಧವಿದೆ, ಆಗ ಜನರ ಜೊತೆ ನಾವು ಇರಬೇಕಾಗುತ್ತದೆ ಎಂದು ಕಾಮಗಾರಿ ನಡೆಸುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಂಗಳೂರು ಎಸಿ ಹರ್ಷವರ್ಧನ, ಮುಲ್ಕಿ ಮೂಡಬಿದ್ರೆ ತಹಶೀಲ್ದಾರ ಶ್ರೀಧರ ಮುಂದಲಮನಿ , ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಕುಸುಮಾಧರ ಮತ್ತಿತರರು ಉಪಸ್ಥಿತರಿದ್ದರು.
Home Uncategorized ಪೊಲೀಸರನ್ನು ಮುಂದಿಟ್ಟು ಕೃಷಿಕರನ್ನು ಬೆದರಿಸಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ: ಶಾಸಕ ಉಮಾನಾಥ ಕೋಟ್ಯಾನ್ ಹೀಗೆ ಹೇಳಿದ್ದು ಯಾರಿಗೆ?