ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜನರು ಎಚ್ಚರಿಕೆಯಿಂದಿರಬೇಕೆಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶವನ್ನು ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ, ಶಾಂತಿಭಂಗಕ್ಕೆ ಕಾರಣವಾಗುವ, ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪೋಸ್ಟ್ಗಳನ್ನು ಹಾಕಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಈ ಸಂದೇಶವು ರಾಜ್ಯದಾದ್ಯಂತ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಮ್, ಮತ್ತು ವಾಟ್ಸ್ಆಪ್ ಇಂದು ಜನರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿವೆ. ಆದರೆ, ಈ ವೇದಿಕೆಗಳನ್ನು ಕೆಲವರು ತಪ್ಪಾಗಿ ಬಳಸಿಕೊಂಡು, ಸಮಾಜದಲ್ಲಿ ಗೊಂದಲ, ದ್ವೇಷ, ಮತ್ತು ಶಾಂತಿಭಂಗಕ್ಕೆ ಕಾರಣವಾಗುವ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಕರ್ನಾಟಕ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ಪ್ರಿಯರೇ ಎಚ್ಚರ!
ಸೋಷಿಯಲ್ ಮೀಡಿಯಾದಲ್ಲಿ ಧಾರ್ಮಿಕ, ಜಾತೀಯ, ಅಥವಾ ರಾಜಕೀಯವಾಗಿ ಸೂಕ್ಷ್ಮವಾದ ವಿಷಯಗಳ ಕುರಿತು ಭಾವನಾತ್ಮಕವಾಗಿ ಕೆರಳಿಸುವ ಅಥವಾ ತಪ್ಪು ಮಾಹಿತಿಯನ್ನು ಹರಡುವ ಪೋಸ್ಟ್ಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಇಂತಹ ಚಟುವಟಿಕೆಗಳಿಂದಾಗಿ ಸಾಮಾಜಿಕ ಸೌಹಾರ್ದತೆಗೆ ಭಂಗ ಬರುವ ಸಾಧ್ಯತೆಯಿದೆ ಎಂದು ಕರ್ನಾಟಕ ಪೊಲೀಸ್ ಇಲಾಖೆ ಎಚ್ಚರಿಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಪ್ರಿಯರು ಪೋಸ್ಟ್ ಮಾಡುವ ಮುನ್ನ ಜಾಗರೂಕರಾಗಿರಿ, ಇದು ಮುನ್ನೆಚ್ಚರಿಕೆ ಎಂದು ಸೂಚಿಸಿದ್ದಾರೆ.
ಪೊಲೀಸರ ಎಚ್ಚರಿಕೆ ಸಂದೇಶ!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ, “ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕುವ ಮುನ್ನ ಎಚ್ಚರಿಕೆಯಿಂದಿರಿ. ಯಾವುದೇ ಸಂಘಟನೆ, ಸಂಸ್ಥೆ, ಅಥವಾ ವ್ಯಕ್ತಿಯ ವಿರುದ್ಧ ಅವಹೇಳನಕಾರಿ ಅಥವಾ ಶಾಂತಿಭಂಗಕ್ಕೆ ಕಾರಣವಾಗುವ ಪೋಸ್ಟ್ಗಳನ್ನು ಹಾಕಿದರೆ, ಭಾರತೀಯ ದಂಡ ಸಂಹಿತೆ (ಬಿಎನ್ಎಸ್) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ (ಐಟಿ ಆಕ್ಟ್) ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಗಾಗುತ್ತೀರಿ,” ಎಂದು ಎಚ್ಚರಿಕೆ ನೀಡಿದೆ.

