ಬೆಂಗಳೂರು : ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಬಳಸಲಾಗುತ್ತಿರುವ ಅಲ್ಯುಮಿನಿಯಂ ಪಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸುವತ್ತ ರಾಜ್ಯ ಸರಕಾರ ಆಲೋಚಿಸಿದ್ದು, ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಅಲ್ಯುಮಿನಿಯಂ ಪಾತ್ರೆಗಳ ಬಳಕೆಗೆ ಕಡಿವಾಣ ಹಾಕಿದೆ. ಈ ನಿಟ್ಟಿನಲ್ಲಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗೆ ಆಧುನಿಕ ಅಡುಗೆ ಪರಿಕರಗಳನ್ನು ಖರೀದಿಸಲು 21.55 ಕೋ.ರೂ. ಅನುದಾನ ನೀಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.
ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಶಾಲೆಗಳಲ್ಲಿ ಆಹಾರವನ್ನು ತಯಾರಿಸುವಾಗ ಅಲ್ಯುಮಿನಿಯಂ ಪಾತ್ರೆಗಳನ್ನು ದೀರ್ಘಾವಧಿಯಲ್ಲಿ ಬಳಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಕೇಂದ್ರ ಸರಕಾರ ಸೂಚಿಸಿತ್ತು. ಅದರಂತೆ ಶಾಲೆಗಳಲ್ಲಿ ಕಡ್ಡಾಯವಾಗಿ ಗುಣಮಟ್ಟದಿಂದ ಕೂಡಿರುವ ಉತ್ತಮವಾದ ಸ್ಟೈನ್ಲೆಸ್ ಸ್ಟೀಲ್ ಪಾತ್ರೆ ಪರಿಕರವನ್ನು ಮಾತ್ರ ಕೊಂಡುಕೊಳ್ಳಲು ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ವಿ. ಶುಭಮಂಗಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.