ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಸಂಸ್ಥೆಯ ಕೂಳೂರು ಕ್ಯಾಂಪಸ್ ನಲ್ಲಿ ‘ತುಳು ಸಾಹಿತ್ಯ, ಸಾಂಸ್ಕೃತಿಕ ಬದುಕು’ ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರ ಮಂಥನ ಅ.29 ರಂದು ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಉದ್ಘಾಟನೆ ನಡೆಸುವರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಅಧ್ಯಕ್ಷ ಡಾ. ತುಕುರಾಮ ಪೂಜಾರಿ ದಿಕ್ಸೂಚಿ ಭಾಷಣ ಮಾಡುವರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೀವನ್ ರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಯೆನೆಪೋಯ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಪ್ರೊ.ಡಾ. ಶಿವಪ್ರಸಾದ್ ಕೆ, ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ.ಶರೀನಾ. ಪಿ ಮತ್ತು ನಾರಾಯಣ ಸುಕುಮಾರ್. ಎ, ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಲಿನಿ ಸಿಕ್ವೇರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪ್ರಥಮ ಗೋಷ್ಠಿಯಲ್ಲಿ ‘ತುಳು ಕವಿತೆ ಮತ್ತು ಮಹಾಕಾವ್ಯ’ ವಿಷಯದ ಬಗ್ಗೆ ಬೆಸೆಂಟ್ ಕಾಲೇಜಿನ ನಿವೃತ್ತ ಪ್ರಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ, ಎರಡನೇ ಗೋಷ್ಠಿಯಲ್ಲಿ ‘ಪಾಡ್ದನಗಳ ಸಾಹಿತ್ಯಿಕ ಮೌಲ್ಯಗಳು’ ವಿಷಯದ ಬಗ್ಗೆ ಶ್ರೀ ವೆಂಕಟರಮಣ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಮಂಚಿ , ಮೂರನೇ ಗೋಷ್ಠಿಯಲ್ಲಿ ‘ತುಳು ಯಕ್ಷಗಾನ ಪ್ರಸಂಗ ಸಾಹಿತ್ಯ ಹಾಡು-ಸಂವಹನ’ ವಿಷಯದ ಬಗ್ಗೆ ಯಕ್ಷಗಾನ ಭಾಗವತರಾದ ಶಿವಪ್ರಸಾದ್ ಎಡಪದವು ವಿಚಾರ ಮಂಡಿಸುವರು.
ಅಪರಾಹ್ನ 2.30 ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಜಾನಪದ ತಜ್ಞ ಕೆ.ಕೆ. ಪೇಜಾವರ ಸಮಾರೋಪ ಭಾಷಣ ಮಾಡುವರು, ಸಂಸ್ಥೆಯ ಸಾಹಿತ್ಯಿಕ ಸಂಘದ ಸಂಯೋಜಕ ಡಾ. ದಿನಕರ ಪಚ್ಚನಾಡಿ ಉಪಸ್ಥಿತರಿರುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

