
ಬಹರೈನ್ನಲ್ಲಿರುವ ‘ಅಮ್ಮ ಕಲಾವಿದರು’ ಸಂಸ್ಥೆಯನ್ನು ಶ್ರೀ ಮೋಹನ್ ದಾಸ್ ರೈ ಎರುಂಬು ಅವರು ಸ್ಥಾಪಿಸಿದ್ದು, ಪ್ರಸ್ತುತ ಶ್ರೀ ಪ್ರಸಾದ್ ಶೆಟ್ಟಿ ಮಜ್ಜಾರು ಅವರ ನೇತೃತ್ವದಲ್ಲಿ ದ್ವೀಪ ದೇಶದಲ್ಲಿ ಕಲಾ ವಲಯದಲ್ಲಿ ಪ್ರಮುಖ ಸ್ಥಾನ ಗಳಿಸಿದೆ. ಹೊಸ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ವೇದಿಕೆ ನೀಡುವ ಉದ್ದೇಶದಿಂದ ಸಂಸ್ಥೆ ಅನೇಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.

2024–2025ನೇ ಸಾಲಿನ ಕಾರ್ಯಕ್ರಮಗಳಿಗಾಗಿ ಸಂಗ್ರಹಿಸಲ್ಪಟ್ಟ ನಿಧಿಯಿಂದ ಹಲವಾರು ಕಲಾವಿದರನ್ನು ಒಟ್ಟುಗೂಡಿಸಿ, ಶ್ರೀ ದಿನಕರ್ ಭಂಡಾರಿ ರಚಿತ “ಮದಿಮೆದ ಇಲ್ಲಡ್” ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಈ ಕಾರ್ಯಕ್ರಮದಿಂದ ಉಳಿದ ಮೊತ್ತದ ಭಾಗವನ್ನು ದೇಣಿಗೆ ನೀಡುವ ನಿರ್ಧಾರವನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಮಜ್ಜಾರು ಹಾಗೂ ಸದಸ್ಯರು ಕೈಗೊಂಡಿದ್ದರು.
ಅದರ ಅಂಗವಾಗಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಕಾರ್ಕಳದ ಚೇತನಾ ಸ್ಪೆಷಲ್ ಸ್ಕೂಲ್ಗೆ ಒಂದು ತಿಂಗಳ ಅಡುಗೆ ಸಾಮಗ್ರಿಗಳ ಖರೀದಿಗೆ ಅಗತ್ಯವಿರುವ ಮೊತ್ತವನ್ನು ಸಂಸ್ಥೆಯ ಸ್ಥಾಪಕ ಸದಸ್ಯರಾದ ಶ್ರೀ ಸಂತೋಷ್ ನಾಯಕ್ ಅಜೆಕಾರು, ಶ್ರೀ ಭೋಜ ಪೂಜಾರಿ ಮತ್ತು ಸುಧೀರ್ ಶೆಟ್ಟಿ ಎಣ್ಣೆಹೊಳೆ ಅವರ ಮೂಲಕ ಹಸ್ತಾಂತರಿಸಲಾಯಿತು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಂಸ್ಥೆಯು ಯೋಜನೆ ರೂಪಿಸಿದ್ದು, ಮುಂದಿನ ದೇಣಿಗೆಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

