ಕೊಚ್ಚಿ : ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಸೂರಜ್ ಲಾಮಾ ಅವರದು ಎನ್ನಲಾದ ಕೊಳೆತ ಮೃತದೇಹ ಕಲಮಶ್ಶೇರಿಯ ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್ಎಂಟಿ)ಆವರಣ ಸಮೀಪದ ಅರಣ್ಯ ಪ್ರದೇಶದಲ್ಲಿ ರವಿವಾರ ಪತ್ತೆಯಾಗಿದೆ. ಕುವೈತ್ನಿಂದ ಗಡಿಪಾರಾದ ಬಳಿಕ ಲಾಮಾ ಅವರು ನಾಪತ್ತೆಯಾಗಿದ್ದರು. ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕನಿಷ್ಠ ಒಂದೂವರೆ ತಿಂಗಳು ಹಳೆಯದ್ದೆಂದು ಭಾವಿಸಲಾದ ಅವಶೇಷವನ್ನು ಪತ್ತೆ ಮಾಡಿದೆ ಎಂದು ಎರ್ನಾಕುಲಂ ಗ್ರಾಮೀಣ ಪೊಲೀಸ್ ನ ಮೂಲಗಳು ತಿಳಿಸಿವೆ. ಕಲಮಶ್ಶೇರಿ ಪ್ರದೇಶದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಎಸ್ಐಟಿ ತನಿಖೆಯನ್ನು ತೀವ್ರಗೊಳಿಸಿದೆ. ತಂಡ ಮೃತದೇಹವನ್ನು ಗುರುತಿಸಿತು ಹಾಗೂ ಕೂಡಲೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿತು ಎಂದು ಮೂಲಗಳು ತಿಳಿಸಿವೆ.

