ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘಕ್ಕೆ ಸುವರ್ಣ ಸಂಭ್ರಮ : ಸಮಾಲೋಚನಾ ಸಭೆ.
ಸರ್ವರೂ ಸೇರಿ ಸುಸಜ್ಜಿತ ಭವ್ಯ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣದ ಸಂಕಲ್ಪ : ಹೆಬ್ರಿ ಟಿ.ಜಿ. ಆಚಾರ್ಯ.
ಹೆಬ್ರಿ : 2028 ರಲ್ಲಿ ನಡೆಯುವ ಸುವರ್ಣ ಸಂಭ್ರಮಕ್ಕೆ 2 ವರ್ಷದ ಮೊದಲೇ ಕಾರ್ಯಯೋಜನೆ ಸಿದ್ಧಪಡಿಸುತ್ತಿರುವುದು ಅತ್ಯಂತ ಸೂಕ್ತ ಮತ್ತು ಶ್ಲಾಘನೀಯ ವಿಚಾರ. ಅತೀ ಬೇಗ ಕಾರ್ಯಪ್ರವೃತ್ತರಾದರೆ ಗುರಿಮುಟ್ಟಲು ಸಾಧ್ಯವಾಗುತ್ತದೆ. ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಸಂಘಕ್ಕೆ ಭವ್ಯವಾದ ಸಮುದಾಯ ಭವನವನ್ನು ತಮ್ಮೇಲ್ಲರ ಸಹಕಾರದಿಂದ ನಿರ್ಮಿಸಿ ಲೋಕಾರ್ಪಣೆ ಮಾಡಬೇಕೆಂದು ಎಲ್ಲರ ಕನಸಾಗಿದೆ. ಸರ್ವರೂ ಕೈಜೋಡಿಸಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ ಎಂದು ಇಂಡಿಯನ್ ಓವಸ್ ಸೀಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ವಿಶ್ವಕರ್ಮ ಸಮಾಜದ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ ಎಂದರು.
ಅವರು ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕ್ಕೆ ೨೦೨೮ ಕ್ಕೆ ಸುವರ್ಣ ಸಂಭ್ರಮ. ಅಂದಿನಿಂದ ಇಂದಿನ ತನಕ ಸರ್ವರೂ ಸೇರಿ ಗ್ರಾಮೀಣ ಪ್ರದೇಶವಾದ ಹೆಬ್ರಿಯ ನಮ್ಮ ಸಂಘವನ್ನು ಕಟ್ಟಿ ಬೆಳೆಸಿ ಮುನ್ನಡೆಸಿದ್ದಾರೆ. ಸಂಘವು ಹೆಬ್ರಿ ಪರಿಸರದ ವಿವಿಧ ಗ್ರಾಮಗಳ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. 19 ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 870 ಕುಟುಂಬಗಳಲ್ಲಿ 9 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಷ್ಟು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಸಂಘಕ್ಕೆ ಮತ್ತು ಸಮಾಜ ಬಾಂಧವರ ಅನುಕೂಲಕ್ಕಾಗಿ ಸುಮಾರು ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸಕಲ ವ್ಯವಸ್ಥೆಯ ಸುಸಜ್ಜಿತ ಭವ್ಯ ಸಮುದಾಯವನ್ನು ನಿರ್ಮಿಸಬೇಕೆನ್ನುವುದು ನಮ್ಮೇಲ್ಲರ ಬಯಕೆ ಎಂದು ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಯೋಧರಾದ ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಹೇಳಿದರು.
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಶಿಕ್ಷಕರಾದ ಹೆಚ್.ಎಂ.ಶಶಿಶಂಕರ್ ಮಾತನಾಡಿ ಸುವರ್ಣ ಸಂಭ್ರಮ ಮತ್ತು ಭವ್ಯ ಸಮುದಾಯ ಭವನ ನಿರ್ಮಾಣದ ಯಶಸ್ಸಿಗೆ ಸರ್ವರೂ ಸೇರಿ ಸಮಾಲೋಚನಾ ಸಭೆಯನ್ನು ನಡೆಸಿ, ಸುವರ್ಣ ಸಂಭ್ರಮದ ಯಶಸ್ವಿಗಾಗಿ ಈಗಿನಿಂದಲೇ ಕಾರ್ಯೋನ್ಮುಖವಾಗಬೇಕಿದೆ ಎಂದರು. ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಹಿರಿಯರು, ಮುಖಂಡರು, ಪೂರ್ವಾಧ್ಯಕ್ಷರು, ಹೆಬ್ರಿ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಪದಾಧಿಕಾರಿಗಳು ಮಾರ್ಗದರ್ಶನ ನೀಡಿದರು. ಹೆಬ್ರಿ ಶ್ರೀ ವಿಶ್ವಕರ್ಮಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಪ್ರೇಮಾ ಎಂ ವರಂಗ, ಕಲಾವತಿ ಶ್ರೀಧರ ಆಚಾರ್ಯ, ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ, ಪ್ರಮುಖರಾದ ವಿಶ್ವಕರ್ಮ ಸಮಾಜದ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ, ಬಿ.ಎಂ.ಶೇಖರ ಆಚಾರ್ಯ, ಎಚ್. ರಮೇಶ ಆಚಾರ್ಯ, ರಾಮಕೃಷ್ಣ ಆಚಾರ್ಯ, ನರಸಿಂಹ ಆಚಾರ್ಯ ವರಂಗ, ರತ್ನಾಕರ ಆಚಾರ್ಯ ಶಿವಪುರ, ಸುರೇಂದ್ರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಹೆಚ್.ಎಂ.ಶಶಿಶಂಕರ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

