ಕಡಂದಲೆ ಸರ್ಕಾರಿ ಮೈನ್ ಶಾಲೆಯಲ್ಲಿ ವಾರ್ಷಿಕೋತ್ಸವ

0
82

ಮೂಡುಬಿದಿರೆ: ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯಂತ ಭವ್ಯವಾಗಿ ಜರುಗಿತು. ಶತಮಾನಕ್ಕೂ ಮೇಲ್ಪಟ್ಟ ಇತಿಹಾಸ ಹೊಂದಿರುವ ಈ ವಿದ್ಯಾಸಂಸ್ಥೆಯ ವೇದಿಕೆಯಲ್ಲಿ ವಿಜ್ಞಾನ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮೌಲ್ಯಗಳು ಒಂದಾಗಿ ಬೆಳಗಿದವು.

ಇಸ್ರೊ ಮಾಜಿ ವಿಜ್ಞಾನಿ, ಪ್ರಸ್ತುತ ಹೈಡ್ರೋಪ್ರೆಸ್ ಇಂಡಸ್ಟ್ರೀಸ್, ಕೊಯಮತ್ತೂರಿನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಕೆ. ಶ್ರೀನಿವಾಸ್ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ, “ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನ ದೇಶದ ಅಭಿವೃದ್ಧಿಗೆ ನಾಂದಿ ಹಾಡಿದೆ. ಇಂದು ಭಾರತವು ಉಪಗ್ರಹ ತಂತ್ರಜ್ಞಾನದಲ್ಲಿ ಬಲಿಷ್ಠ ಸ್ಥಾನ ಪಡೆದುಕೊಂಡಿರುವುದು ಇಸ್ರೋ ಸಂಸ್ಥೆಯ ಶ್ರಮ ಹಾಗೂ ಭಾರತೀಯ ವಿಜ್ಞಾನಿಗಳ ಅನಂತ ಪರಿಶ್ರಮದ ಫಲ. ಮಕ್ಕಳಲ್ಲಿ ವಿಜ್ಞಾನಾಸಕ್ತಿಯನ್ನು ಬೆಳೆಸುವುದರ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಎಂಎಫ್ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ, ಶಾಲೆಯ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ. ಊರಿನ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಂತರೆ, ಮುಂದಿನ ದಿನಗಳಲ್ಲಿ ಈ ಸಂಸ್ಥೆ ಇನ್ನಷ್ಟು ಪ್ರಗತಿಯ ಹೆಜ್ಜೆ ಇಡಲಿದೆ ಎಂದು ಭರವಸೆ ನೀಡಿದರು.
ಲಯನ್ಸ್ ಕ್ಲಬ್ ಅಲಂಗಾರು ಘಟಕದ ಅಧ್ಯಕ್ಷರು ಅಮಿತ್ ಡಿ’ಸಿಲ್ವಾ, ರಾಜ್ಯ ಸರಕಾರಿ ನೌಕರರ ಸಂಘ ಮೂಡುಬಿದಿರೆ ಘಟಕದ ಅಧ್ಯಕ್ಷರು – ಡಾ. ದೊರೆಸ್ವಾಮಿ, ಹಂಡೇಲು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ,‌ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಕೆ., ರೇಖಾ, ಭವಾನಿ, ಯಶೋದಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ಹೊಯ್ಗೆಮನೆ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಷ್ಮಾ ಶೆಟ್ಟಿ, ಮುಖ್ಯ ಶಿಕ್ಷಕಿ ಲೀಡಿಯ ಸೆರವೋ ಮತ್ತಿತರಿದ್ದರು.
ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಹ ಶಿಕ್ಷಕಿ ಎಲಿಜಾ ಸ್ವಾಗತಿಸಿದರು. ರಂಜಿತ್ ಭಂಡಾರಿ ನಿರೂಪಿಸಿದರು. ಶಿಕ್ಷಕ ಶರಣಯ್ಯ ವಂದಿಸಿದರು.

LEAVE A REPLY

Please enter your comment!
Please enter your name here