ಭಟ್ಕಳ : ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಚಿತ್ರಾಪುರ ಮಠದ ಶ್ರೀವಲ್ಲಿ ಪದವಿಪೂರ್ವ ವಿದ್ಯಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು.
ಸಂಕ್ರಾಂತಿಯು ಕೇವಲ ಒಂದು ಹಬ್ಬವಲ್ಲ, ಅದು ಸಂಸ್ಕೃತಿ, ಸಂಪ್ರದಾಯ, ಕುಟುಂಬ ಮತ್ತು ಆಧ್ಯಾತ್ಮಿಕತೆಯನ್ನು ಒಗ್ಗೂಡಿಸುವ ಮಹತ್ವದ ಆಚರಣೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ಇಂತಹ ಪರಂಪರಾ ಆಚರಣೆಗಳನ್ನು ಯುವ ಸಮುದಾಯ ಅಚ್ಚಳಿಯಂತೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾದ ಅಗತ್ಯವಿದೆ ಎಂಬ ಉದ್ದೇಶದಿಂದ, ಶ್ರೀವಲ್ಲಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ರವೀಂದ್ರ ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ “ಸಂಕ್ರಾಂತಿ ಸಂಭ್ರಮ” ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಆಕರ್ಷಕ ರಂಗೋಲಿಗಳನ್ನು ಬಿಡಿಸಿ, ಕಬ್ಬು ಮತ್ತು ಮಾವಿನ ತೋರಣಗಳಿಂದ ವಿದ್ಯಾಲಯವನ್ನು ಶೃಂಗಾರಗೊಳಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಸ್ನೇಹ–ಪ್ರೀತಿಯೊಂದಿಗೆ ಎಳ್ಳು–ಬೆಲ್ಲ ಹಂಚಿಕೊಂಡು ಸಂಭ್ರಮಿಸಿದರು.
ವಿದ್ಯಾರ್ಥಿಗಳು ಪ್ರದರ್ಶಿಸಿದ ಜನಪದ ನೃತ್ಯಗಳು ಮತ್ತು ಹಾಡುಗಳು ಸಾಂಸ್ಕೃತಿಕ ಮೆರಗನ್ನು ಹೆಚ್ಚಿಸಿತು. ಒಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಂದಾಗಿ ಸಂಕ್ರಾಂತಿ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಿದ್ದು, ಈ ಕಾರ್ಯಕ್ರಮವು ತಾಲೂಕಿನಲ್ಲಿಯೇ ವಿಶೇಷ ಗಮನ ಸೆಳೆದಿತು.

