ಜಗತ್ತಿನ ಕಲ್ಯಾಣಕ್ಕಾಗಿ, ಸವಾಲುಗಳ ಮುಕ್ತಿಗೆ ‘ಹಿಂದೂ ರಾಷ್ಟ್ರ’ವೇ ಏಕೈಕ ಪರಿಹಾರ – ಶ್ರೀ. ಗುರುಪ್ರಸಾದ್ ಗೌಡ
ಮಂಗಳೂರು : ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಅಯೋಧ್ಯೆಯ ರಾಮಮಂದಿರದಂತೆ ಹಿಂದೂ ರಾಷ್ಟ್ರದ ಉದಯವೂ ನಿಶ್ಚಿತವಿದೆ. ದೇವಸ್ಥಾನಗಳ ಸರ್ಕಾರೀಕರಣವನ್ನು ಕೊನೆಗಾಣಿಸಿ ಸಾತ್ವಿಕ ಸಮಾಜ ನಿರ್ಮಿಸಲು ರಾಮರಾಜ್ಯದ ಮಾದರಿಯೇ ನಮಗೆ ಬೇಕಾಗಿದೆ .
ನಮ್ಮ ಮುಂದೆ ಲವ್ ಜಿಹಾದ್,ಹಲಾಲ್ ಜಿಹಾದ್ , ಗೋ ಹತ್ಯೆ,ಹಿಂದೂಗಳ ಹತ್ಯೆ ಈ ರೀತಿಯ ಅನೇಕ ಸಮಸ್ಯೆಗಳು ಇವೆ.ಇದಕ್ಕೆ ಒಂದೇ ಪರಿಹಾರ, ಹಿಂದೂಗಳ ಹಿತವನ್ನು ಕಾಪಾಡುವ ಹಿಂದೂ ರಾಷ್ಟ್ರವೇ ಬೇಕು ಎಂದು ಗುರುಪ್ರಸಾದ್ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.ಹಿಂದೂ ರಾಷ್ಟ್ರ ಸ್ಥಾಪನೆಗಾಗಿ, “ಹಿಂದೂಗಳು ಜಾತಿ-ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಿ. ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಿ,” ಎಂದು ಗುರುಪ್ರಸಾದ್ ಗೌಡ ನೆರೆದ ಹಿಂದುತ್ವನಿಷ್ಟ ರಿಗೆ ಕರೆ ನೀಡಿದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಕೋಡಿಯಲ್ ಬೈಲ್ ನ ಕೂಟಕ್ಕಲ ಆಡಿಟೋರಿಯಂ ನಲ್ಲಿ ಭಾನುವಾರ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ದೀಪಪ್ರಜ್ವಲನೆ ,ಶಂಖನಾದ ಮತ್ತು ವೇದಮಂತ್ರ ಘೋಷದಿಂದ ಪ್ರಾರಂಭಿಸಲಾಯಿತು.

ಕಾರ್ಯಕರ್ಮದ ನಿರೂಪಣೆಯನ್ನು ಸೌ ಸುಧಾ ಮತ್ತು ಸೌವನಜಾಕ್ಷಿ ಇವರು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಡಾ ಪ್ರಣವ್ ಮಲ್ಯ ಇವರು ಸಮಿತಿಯ ಕಾರ್ಯ ಪರಿಚಯ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 350 ಕ್ಕೂ ಅಧಿಕ ಹಿಂದೂ ಬಾಂಧವರು ಪಾಲ್ಗೊಂಡರು.
ಧರ್ಮಾಚರಣೆಯಿಂದ ಆತ್ಮಬಲ, ಆತ್ಮಬಲದಿಂದಲೇ ಧರ್ಮರಕ್ಷಣೆ ! – ಸೌ. ಲಕ್ಷ್ಮಿ ಪೈ
ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ ಅವರು ಮಾತನಾಡುತ್ತಾ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೆಯೋ, ಅಲ್ಲಿ ಜಯವಿರುತ್ತದೆ. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ; ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ. ನಮ್ಮ ಪ್ರತಿಯೊಂದು ಹಬ್ಬ, ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕವಾದ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು, ಶ್ರದ್ಧೆಯಿಂದ ಆಚರಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯ. ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ; ಆದ್ದರಿಂದ ಸಂಪ್ರದಾಯದ ಹಿಂದಿನ ಸತ್ಯವನ್ನು ತಿಳಿಯೋಣ, ಕರ್ಮನಿಷ್ಠ ಹಿಂದೂಗಳಾಗೋಣ. ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯಿಂದ ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳೋಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.

ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಸಂಘಟಿತರಾಗಿ – ನ್ಯಾಯವಾದಿ ಜಯಪ್ರಕಾಶ ಕರೆ
ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ನ್ಯಾಯವಾದಿ ಜಯಪ್ರಕಾಶ ಅವರು ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡುತ್ತಾ, “ಮೆಖಾಲೆ ಶಿಕ್ಷಣ ಪದ್ಧತಿಯಿಂದಾಗಿ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಎದ್ದು ಕಾಣುತ್ತಿದೆ,” ಎಂದು ವಿಷಾದಿಸಿದರು. ಧರ್ಮ ರಕ್ಷಣೆ ಎಂಬುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಧರ್ಮಕ್ಕೆ ಧಕ್ಕೆ ಬಂದಾಗ ಮೌನವಾಗಿರದೆ, ಸಂಘಟಿತರಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸಬೇಕು. ಹಿಂದೂ ವಿರೋಧಿ ಕೃತ್ಯಗಳನ್ನು ತಡೆಯಲು ಕಾನೂನಿನ ಸದುಪಯೋಗ ಪಡೆದುಕೊಳ್ಳುವುದು ಮತ್ತು ಒಗ್ಗಟ್ಟಿನಿಂದ ಹೋರಾಡುವುದು ಇಂದಿನ ಅಗತ್ಯವಾಗಿದೆ ಎಂದುನ್ಯಾಯವಾದಿ ಜಯಪ್ರಕಾಶ ಇವರು ತಿಳಿಸಿದರು.
ವಿಜಯ ಕುಮಾರ್,ಜಿಲ್ಲಾ ಸಮಿತಿ ಸಮನ್ವಯಕರು, ದಕ್ಷಿಣ ಕನ್ನಡ
ಹಿಂದೂ ಜನಜಾಗೃತಿ ಸಮಿತಿ

