ಅಹಮದಾಬಾದ್ : ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯ ಗಾಂಗ್ಡಾ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ನಡೆದ ಭೀಕರ ಮತ್ತು ರೋಚಕ ಘಟನೆಯೊಂದು ನಡೆದಿದೆ. ತನ್ನ ಮಗನನ್ನು ಚಿರತೆಯ ದಾಳಿಯಿಂದ ರಕ್ಷಿಸಲು ವೃದ್ಧ ತಂದೆಯೊಬ್ಬರು ಅದರೊಂದಿಗೆ ಹೋರಾಡಿ ಚಿರತೆಯನ್ನು ಕೊಂದಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ವೃದ್ಧರು ತಮ್ಮ ಮನೆಯ ಹೊರಗೆ ಕುಳಿತಿದ್ದಾ ಸಂದರ್ಭದಲ್ಲಿ ಹತ್ತಿರದ ಪೊದೆಗಳಿಂದ ನುಗ್ಗಿ ಬಂದ ಚಿರತೆಯೊಂದು ಅನಿರೀಕ್ಷಿತವಾಗಿ ಅವರ ಮೇಲೆ ದಾಳಿ ಮಾಡಿದೆ . ತಂದೆಯ ಚೀರಾಟ ಕೇಳಿ ಮಗ ಕೂಡಲೇ ರಕ್ಷಣೆಗೆ ಧಾವಿಸಿದ್ದು , ಆದರೆ ಆ ಕ್ರೂರ ಪ್ರಾಣಿ ಮಗನ ಮೇಲೆ ತಿರುಗಿಬಿದ್ದು, ಆತನಿಗೆ ತೀವ್ರವಾಗಿ ಗಾಯಗೊಳಿಸಿದೆ. ಇದರಿಂದ ಮಗನ ದೇಹದಿಂದ ರಕ್ತಸ್ರಾವವಾಗಿದೆ. ಆರಂಭಿಕ ದಾಳಿಯಲ್ಲಿ ತಮಗೂ ಗಾಯಗಳಾಗಿದ್ದರೂ ಸಹ, ಆ ತಂದೆ ಅದ್ಭುತ ಧೈರ್ಯವನ್ನು ಪ್ರದರ್ಶಿಸಿದ್ದಾರೆ.
ಹತ್ತಿರದಲ್ಲೇ ಇದ್ದ ಕುಡುಗೋಲನ್ನು ಕೈಗೆತ್ತಿಕೊಂಡ ಅವರು, ಚಿರತೆಯೊಂದಿಗೆ ಭೀಕರವಾಗಿ ಹೋರಾಡಿದ್ದಾರೆ. ಈ ಘಟನೆಯನ್ನು ನೋಡಿದ ಗ್ರಾಮಸ್ಥರು ಆ ದೃಶ್ಯ “ರಕ್ತಸಿಕ್ತ ಮತ್ತು ಭಯಾನಕವಾಗಿತ್ತು” ಎಂದು ಬಣ್ಣಿಸಿದ್ದಾರೆ. ಚಿರತೆ ಕುಸಿದುಬಿದ್ದು ಸ್ಥಳದಲ್ಲೇ ಸಾಯುವವರೆಗೆ ವೃದ್ಧರು ಅದರ ಮೇಲೆ ಸತತವಾಗಿ ಪ್ರಹಾರ ಮಾಡಿದ್ದಾರೆ.
ಈ ಘಟನೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು , ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಾಳುಗಳನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪ್ರಾಣಕ್ಕೆ ಅಪಾಯವಿಲ್ಲ ಎಂದು ವರದಿಯಾಗಿದೆ.
ಚಿರತೆಯನ್ನು ಕೊಂದ ವೃದ್ಧನ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ ಎಂದು ಹೇಳಲಾಗುತ್ತದೆ. ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಇಂತಹ ಘಟನೆಗಳು ನಡೆದಾಗ ಅರಣ್ಯ ಇಲಾಖೆ ತನಿಖೆ ನಡೆಸುತ್ತದೆ. ಚಿರತೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಿರ್ ಅರಣ್ಯ ಪ್ರದೇಶಕ್ಕೆ ಸಮೀಪವಿರುವ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿರುವುದು ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

