ಉಡುಪಿ: ಜಾತೀಯತೆ, ಪ್ರಾದೇಶಿಕತೆ, ದುರಾಗ್ರಹ ಭಾವನೆಯಿಂದ ಜ್ಞಾನದ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ವಿಷಯಗಳನ್ನು ಗ್ರಹಿಸಿಕೊಳ್ಳಬೇಕು. ಮನುಷ್ಯನಲ್ಲಿ ಗುಣಗ್ರಾಹಿತ್ವ ಹೆಚ್ಚಿದ್ದಾಗ ದೋಷಗಳು ಕಡಿಮೆಯಾಗುತ್ತವೆ ಎಂದು ಹಿರಿಯ ಲೇಖಕಿ ಡಾ. ವೀಣಾ ಬನ್ನಂಜೆ ಹೇಳಿದರು.
ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ರತ್ನಗರ್ಭಾ ವಸುಂಧರಾ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಜನಾಂಗ ಪೂರ್ವಜರನ್ನು ನೆನಪು ಮಾಡಿಕೊಳ್ಳುವುದನ್ನು ಮರೆತುಬಿಟ್ಟಿದ್ದಾರೆ. ಹಿರಿಯ ಒಳಿತುಗಳನ್ನು ಸ್ವೀಕರಿಸಬೇಕು. ಚರಿತ್ರೆಯನ್ನು ವಿಮರ್ಶೆ ಮಾಡಿ ವರ್ತಮಾನವನ್ನು ಹಾಳುಮಾಡಿಕೊಳ್ಳಬಾರದು. ಇತಿಹಾಸದಲ್ಲಿ ಆಗಿಹೋದವರನ್ನು ದೂಷಿಸುವುದರಿಂದ ಸಾಧಿಸುವಂತದ್ದು ಏನೂ ಇಲ್ಲ ಎಂದರು.
ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತಾನಾಡಿ, ಸಮಾಜಕ್ಕೆ ಸಂಸ್ಕಾರ ನೀಡುವ ಕೆಲಸವಾಗಬೇಕು. ಇದರಿಂದ ಪ್ರತಿ ವ್ಯಕ್ತಿಯ ಸಕಾರಾತ್ಮಕ ಬೆಳವಣಿಗೆ ಸಾಧ್ಯವಿದೆ. ಸಾಧಕರನ್ನು ಮರೆತಿರುವುದು ಜೀವನ ಮೌಲ್ಯಗಳ ಪತನಕ್ಕೆ ಮೂಲ ಕಾರಣ. ಯೋಗ್ಯತೆ ಮೀರಿ ವ್ಯಕ್ತಿಗಳನ್ನು ಉನ್ನತ ಸ್ಥಾನದಲ್ಲಿ ಕುಳ್ಳಿರಿಸಿದರೆ ಸಮಾಜ ನಾಶವಾಗುತ್ತದೆ ಎಂಬ ಎಚ್ಚರ ಅಗತ್ಯ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂದ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಲೇಖಕ ಪ್ರಕಾಶ್ ಮಲ್ಪೆ ಉಪಸ್ಥಿತರಿದ್ದರು. ಪ್ರಾರ್ಥನಾ ಸ್ವರ್ಣ ಗೌರಿ, ನಯನಾ ಭಾಗವತ್, ಅಪೂರ್ವ -ಪ್ರಾರ್ಥಿಸಿದರು. ಸಿಂಧೂ ಜೋಶಿ – ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜಯಲಕ್ಷಿ ವಂದಿಸಿದರು.

