- ವರದಿ : ಮಂದಾರ ರಾಜೇಶ್ ಭಟ್
ಬೆಂಗಳೂರು : ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ಮಂಗಳೂರಿನ ‘ಅಮೃತ ಪ್ರಕಾಶ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ನೋಬೆಲ್ ಕನ್ನಡಿಗ’ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ.
ಬೆಂಗಳೂರಿನ ಒರಿಯಂಟಲ್ ಫೌಂಡೇಶನ್ ವತಿಯಿಂದ ಈ ಗೌರವವನ್ನು ನೀಡಲಾಗುತ್ತಿದೆ.
ಸಾಧನೆಯ ಹಾದಿ –
ಕಳೆದ 21 ವರ್ಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಮಾಜಸೇವೆಯಲ್ಲಿ ಸಕ್ರಿಯವಾಗಿರುವ ಮಾಲತಿ ಶೆಟ್ಟಿ ಅವರು, ‘ಅಮೃತ ಪ್ರಕಾಶ’ ಪತ್ರಿಕೆಯನ್ನು ಕಳೆದ 13 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸ್ವತಃ 9 ಕೃತಿಗಳನ್ನು ರಚಿಸಿರುವ ಇವರು, ತಮ್ಮ ಪತ್ರಿಕೆಯ ಮೂಲಕ ಇತರ ಲೇಖಕರ 49 ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಅಲ್ಲದೆ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು 117ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಉಚಿತ ಕಾರ್ಯಕ್ರಮಗಳನ್ನು ನಡೆಸಿ ದಾಖಲೆ ನಿರ್ಮಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ-
ಈ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 1ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ನಟ ವಿನೋದ್ ರಾಜ್, ನಟಿ ಅಭಿನಯ, ಗಾಯಕಿ ಡಾ. ಗೀತಾ ಕೈವಾರ ಹಾಗೂ ಹಾಸ್ಯ ನಟ ಮೈಸೂರು ರಮಾನಂದ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ತಿಳಿಸಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಕಿಟ್ಟಣ್ಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ದಂಪತಿಗಳ ಪುತ್ರಿಯಾದ ಇವರು, ಪ್ರಸ್ತುತ ಪತಿ ಸತ್ಯ ಪ್ರಕಾಶ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ.

