ಹಿಂದೂ ಜನಜಾಗೃತಿ ಸಮಿತಿಯಿಂದ ಶೈಕ್ಷಣಿಕ ಕ್ಷೇತ್ರಗಳಿಗೆ ಮನವಿ
ಬಂಟ್ವಾಳ : ಫೆಬ್ರವರಿ 14ರಂದು ‘ವ್ಯಾಲೆಂಟೈನ್ ಡೇ’ ಆಚರಿಸುವ ಪಾಶ್ಚಾತ್ಯರ ಕೆಟ್ಟ ರೂಢಿ ಭಾರತದಲ್ಲಿಯೂ ವ್ಯಾಪಕವಾಗಿ ಹರಡಿದೆ. ಪಾಶ್ಚಾತ್ಯರು ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಯುವಪೀಳಿಗೆ ಭೋಗವಾದ ಮತ್ತು ಅನೈತಿಕತೆಯತ್ತ ಸಾಗುತ್ತಿದೆ. ‘ವ್ಯಾಲೆಂಟೈನ್ ಡೇ’ ಹಿನ್ನೆಲೆಯಲ್ಲಿ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಹರ್ಷೇಂದ್ರ ಶೆಟ್ಟಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಸೋಮನಾಥ್ ಸಾಲ್ಯಾನ್, ಸಮಿತಿಯ ಪರವಾಗಿ ನಾರಾಯಣ ಅಮೀನ್, ಯೋಗೀಶ್ ಹಾಗೂ ಗಿರೀಶ್ ಹೆಗ್ಡೆ ಉಪಸ್ಥಿತರಿದ್ದರು. ಶಾಲಾ-ಕಾಲೇಜುಗಳಲ್ಲಿ ಮಾತ್ರವಲ್ಲದೆ, ಇತರ ಕಡೆಗಳಲ್ಲೂ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಈ ಮೂಲಕ ವಿನಂತಿಸಲಾಗಿದೆ.
ವೆಲೆಂಟೈನ್ ಡೇ ದಿನದಂದು ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆಯುವ ಅನಾಚಾರಗಳನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವ ಕುರಿತು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ.ಡಿ. ಮಂಚಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಚಂದ್ರ ಅವರಿಗೂ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಪ್ರೊಫೆಸರ್ ಗಿರೀಶ್ ಹೆಗ್ಡೆ, ಉದ್ಯಮಿಗಳಾದ ಸೋಮನಾಥ್ ಸಾಲ್ಯಾನ್ ಮತ್ತು ಸುರೇಶ್ ರೈ, ವಿಶ್ವ ಹಿಂದೂ ಪರಿಷತ್ತಿನ ಬಂಟ್ವಾಳ ಪ್ರಖಂಡ ಉಪಾಧ್ಯಕ್ಷರಾದ ಕೇಶವ ದೈಫಲ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ನಾರಾಯಣ ಬಂಟ್ವಾಳ ಅವರು ಭಾಗವಹಿಸಿ, ವಿದ್ಯಾಸಂಸ್ಥೆಗಳ ಪಾವಿತ್ರ್ಯತೆಯನ್ನು ಕಾಪಾಡುವಂತೆ ಮನವಿ ಮಾಡಿದರು.
ವ್ಯಾಲೆಂಟೈನ್ ಡೇ ವೇಳೆ ‘ಪಾರ್ಟಿಗಳಲ್ಲಿ’ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಈ ದಿನ ಗರ್ಭನಿರೋಧಕ ಸಾಮಗ್ರಿಗಳ ಹೆಚ್ಚಿನ ಮಾರಾಟವು ಅನೈತಿಕ ಸಂಬಂಧಗಳ ಹೆಚ್ಚಳವನ್ನು ತೋರಿಸುತ್ತದೆ. ಯುವತಿಯರನ್ನು ಸೆಳೆಯಲು ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರು ‘ಲವ್ ಜಿಹಾದ್’ ಮೂಲಕ ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಫೆಬ್ರವರಿ 14ರಂದು ನಗರದಲ್ಲಿ ವಿಶೇಷ ಪೊಲೀಸ್ ಪಥಕ ನಿಯೋಜಿಸಬೇಕು. ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ, ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ‘ವಿಶೇಷ ಹೆಲ್ಪ್ಲೈನ್ ನಂಬರ್’ ಅನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯ ಮೂಲಕ ಒತ್ತಾಯಿಸಲಾಗಿದೆ.

