ಸತತ ಪರಿಶ್ರಮ ನಮ್ಮನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯಬಲ್ಲದು – ರವೀಂದ್ರ ಪಿ
ಕೇಂದ್ರ ಸರಕಾರದ ಓಖಿಂ ಪ್ರಾಧಿಕಾರವು ನಡೆಸಿದ 2026ನೇ ಸಾಲಿನ ಜೆಇಇ ಮೈನ್ಸ್ ಪ್ರಥಮ ಹಂತದ ಪ್ರವೇಶಾತಿ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಪರ್ಸೆಂಟೈಲ್ ಗಳಿಸುವುದರ ಮೂಲಕ ಉನ್ನತ ಸಾಧನೆಯನ್ನು ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸತತ ಪರಿಶ್ರಮ, ಶಿಸ್ತು ಹಾಗೂ ಶ್ರದ್ಧೆಯ ಕಲಿಕೆಯು ನಮ್ಮನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯಬಲ್ಲದು. ವಿದ್ಯಾರ್ಥಿಗಳ ಪರಿಶ್ರಮದ ಜೊತೆ ಜೊತೆಗೆ ಗುರುಗಳ ನಿರಂತರ ಮಾರ್ಗದರ್ಶನ, ಪೋಷಕರ ಬೆಂಬಲ ಹಾಗೂ ಕಲಿಕೆಗೆ ಬೇಕಾದಂತಹ ಪೂರಕ ವಾತಾವರಣ ಇದ್ದರಷ್ಟೇ ಸಾಧನೆಯ ಹಾದಿ ಸುಗಮವಾಗುವುದು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಗೈದು, ಸಿಹಿ ತಿಂಡಿ ಹಂಚಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಮಂಡಳಿಯ ನಿರ್ದೇಶಕರಾದ ಡಾ. ಕೆ ಎನ್ ಸುಬ್ರಹ್ಮಣ್ಯ, ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸಎನ್,ವಿದ್ಯಾರ್ಥಿಗಳ ಪೋಷಕರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥೆ ದಯಾಮಣಿ ಟಿ. ಕೆ ಕಾರ್ಯಕ್ರಮವನ್ನು ನಿರ್ವಹಿಸಿದರು.

