“ಜಿಲ್ಲೆ ಸಮಾಚಾರ” ಪತ್ರಿಕಾ ಬಳಗ 2025ರ ವರ್ಷದ ವ್ಯಕ್ತಿ ಪ್ರಶಸ್ತಿಗೆ : ಡಾ|| ಬಿ.ಎಸ್. ನಾಗಪ್ರಕಾಶ್ ಆಯ್ಕೆ

0
12

ದಾವಣಗೆರೆ: ದಾವಣಗೆರೆಯ “ಜಿಲ್ಲೆ ಸಮಾಚಾರ” ಪತ್ರಿಕಾ ಬಳಗದಿಂದ ಪ್ರತೀ ವರ್ಷದಂತೆ ಈ ವರ್ಷವೂ “ವರ್ಷದ ವ್ಯಕ್ತಿ-2025ರ” ಪ್ರಶಸ್ತಿಗೆ ಆಯ್ಕೆಯನ್ನು ಪ್ರಕಟಿಸಲಾಗಿದೆ. ನಗರದ ಜನಪ್ರಿಯ ವೈದ್ಯರು ಹಾಗೂ ಸಮಾಜ ಸೇವಾ ಪ್ರೇಮಿಗಳೂ ಆದ ಡಾ|| ಬಿ.ಎಸ್. ನಾಗಪ್ರಕಾಶ್‌ರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲು ಬಳಗವು ಒಮ್ಮತದ ನಿರ್ಧಾರವನ್ನು ಕೈಗೊಂಡಿದೆ ಎಂದು ಪತ್ರಿಕಾ ಬಳಗದ ಸಂಸ್ಥಾಪಕರಾದ ವಿ.ಹನುಮಂತಪ್ಪ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೇ ಫೆ.22 ರಂದು ಭಾನುವಾರ ಸಂಜೆ ಸಂಜೆ 5-30 ಗಂಟೆಗೆ ವಿದ್ಯಾನಗರ ಬಡಾವಣೆಯ ಕುವೆಂಪು ಕನ್ನಡ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಪ್ರಶಸ್ತಿಯನ್ನು ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಕುಂ.ವೀರಭದ್ರಪ್ಪ ಪ್ರದಾನಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಡಾ|| ಸುರೇಶ್ ಹನಗವಾಡಿ ನೆರವೇರಿಸಲಿದ್ದಾರೆ. ಖ್ಯಾತ ನ್ಯಾಯವಾದಿ ಶ್ರೀರಾಮಚಂದ್ರ ಕಲಾಲ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶ್ರೀ ಕನ್ನಿಕಾ ಪರಮೇಶ್ವರಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಆರ್.ಜಿ. ಶ್ರೀನಿವಾಸಮೂರ್ತಿ, ಬಾಪೂಜಿ ವಿದ್ಯಾಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀ ಸಂಪನ್ನ ವಿ.ಮುತಾಲಿಕ್, ಎ.ಆರ್.ಜಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಬಿ.ಬೋರಯ್ಯ, ಜೆ.ಜೆ.ಎಂ.ಎA.ಕಾಲೇಜಿನ ಪ್ರಿನ್ಸಿಪಾಲರಾದ ಡಾ|| ಶುಕ್ಲಾಶೆಟ್ಟಿಯವರು ಭಾಗವಹಿಸಲಿದ್ದಾರೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ಡಾ. ಸಿ.ಕೆ.ಆನಂದತೀರ್ಥಾಚಾರ್ ಹೇಳಿದ್ದಾರೆ.
ಸಮಾರಂಭದ ಅಂಗವಾಗಿ ಏರ್ಪಡಿಸಿದ ಸಾರ್ವಜನಿಕರಿಗೆ ಉಚಿತ ಗಾನ ಪ್ರತಿಭಾನ್ವೇಷಣೆ ಮತ್ತು ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ನಿರಂತರವಾಗಿ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಳಗದ ಸಂಚಾಲಕರಾದ ಸಾಲಿಗ್ರಾಮ ಗಣೇಶ್ ಶೆಣೈ ಕೋರಿದ್ದಾರೆ.

LEAVE A REPLY

Please enter your comment!
Please enter your name here