ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಮೊದಲ ಮೂರು ತ್ರಿವರ್ಗ ಎನಿಸಿಕೊಂಡರೆ ಕೊನೆಯದಾದ ಮೋಕ್ಷವು ಅಪವರ್ಗ ಎನಿಸಿಕೊಳ್ಳುತ್ತದೆ. ತ್ರಿವರ್ಗಗಳನ್ನು ಪಡೆದುಕೊಳ್ಳುವುದೇ ದೊಡ್ಡದು ಎಂದು ನಾವಂದುಕೊಂಡಿದ್ದೇವೆ. ಆದರೆ ಪಡೆದುಕೊಳ್ಳುವುದಕ್ಕಿಂತ ಬಂಧನಗಳಿಂದ ಬಿಡಿಸಿಕೊಂಡು ಮೋಕ್ಷವನ್ನು ಹೊಂದುವುದೇ ಶ್ರೇಷ್ಠ ಎಂಬುದಾಗಿ ಸಮಗ್ರವಾದ ಪುರುಷಾರ್ಥಗಳ ವಿವರಣೆಯನ್ನು ಮಹಾಭಾರತ ನೀಡುತ್ತದೆ ಎಂಬುದಾಗಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸಮಾಲೆಯ ದ್ವಿತೀಯ ಸೋಪಾನದಲ್ಲಿ ಅವರು ‘ವಂಶಾವಾರಿಧಿ ರತ್ನ – ವಿಧುವಂಶ ವಾರಿಧಿ’ ಎಂಬ ಕುರಿತಾಗಿ ಫೆ. 28ರಂದು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೀತಾ ಮಲ್ಯ ಪ್ರಾರ್ಥಿಸಿ ಸುಲೋಚನಾ ಬಿ.ವಿ. ಕರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ ಗೋಖಲೆ ವಂದಿಸಿದರು.

