ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಪ್ರಾರಂಭಿಸಿದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಗೆ ಎಚ್ಚರಿಕೆ

0
32


ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಶಿಕ್ಷಣ ಸಂಯೋಜಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆ.

ಬೆಂಗಳೂರು : ಥಣಿಸಂದ್ರದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನ ಮಾನ್ಯತೆ ರದ್ದಾಗಿದ್ದು, ಹೈಕೋರ್ಟ್ ಶಾಲಾ ದಾಖಲಾತಿ ಪ್ರಾರಂಭಿಸದಂತೆ ಆದೇಶಿಸಿದೆ. ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಶಾಲಾ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದೆ.

ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದು, 2026-2027 ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದಲ್ಲಿ ನ್ಯಾಯಾಲಯದ ನಿಂದನೆ ಮಾಡಿದಂತಾಗುತ್ತದೆ. ಆದ್ದರಿಂದ ಹೈಕೋರ್ಟ್ ಆದೇಶದವರೆವಿಗೂ ಯಾವುದೇ ದಾಖಲಾತಿ ಪ್ರಾರಂಭಿಸಬಾರದು. ಆದೇಶವನ್ನು ಉಲ್ಲಂಘಿಸಿ ದಾಖಲಾತಿ ಮಾಡಿಕೊಂಡರೆ ತಮ್ಮ ಶಾಲೆಯ ವಿರುದ್ಧ ನ್ಯಾಯಾಂಗ ನಿಂದನೆ ವರದಿಯನ್ನು ನ್ಯಾಯಾಲಯಕ್ಕೆ ಹಾಗೂ ಇಲಾಖಾ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ವಲಯದ -14 ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಗಂಗೊಂಡನಹಳ್ಳಿಯ ಅಬ್ದುಲ್ ಹಮೀದ್ ಪಾಷ ಹಾಗೂ ಭಾರತಿ ನಗರದ ಅರ್ಷಿಯ ಮೊದಮ್ಮದಿ ಸರಿಷ್ ಸಲ್ಲಿಸಿರುವ ದೂರಿನ ಮೆರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಆಡಳಿತ ಮಂಡಳಿಗೆ ಸ್ಪಷ್ಟವಾದ ಎಚ್ಚರಿಕೆ ನೀಡಿದ್ದಾರೆ.

ದೂರು ಆಧರಿಸಿ ಪ್ರೌಢ ಶಾಲಾ ವಿಭಾಗದ ಶಿಕ್ಷಣ ಸಂಯೋಜಕರಾದ ರಂಗನಾಥ ಅವರಿಗೆ ಈ ಬಗ್ಗೆ ಪರಿಶೀಲಿಸಿ ಮೂರು ದಿನಗಳ ಒಳಗಾಗಿ ಸೂಕ್ತ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಮಾನ್ಯತೆ ಇಲ್ಲದ ಈ ಸಂಸ್ಥೆ 6 ರಿಂದ 8 ನೇ ತರಗತಿಗೆ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಿಸಿದೆ, ಹೈ ಕೋರ್ಟ್ ನಲ್ಲಿ ದಾಖಲಾತಿ ಮಾಡಿಕೊಳ್ಳುವುದಿಲ್ಲ ಎಂದು ಒಪ್ಪಿ ಶಾಲಾ ನಡೆಸುತ್ತಿದ್ದು ಈ ಎಲ್ಲಾ ನೀತಿ, ನಿಯಮ, ಕಾನೂನುಗಳನ್ನು ಉಲ್ಲಂಘಿಸಿದ್ದು, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಇವರು ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ಶಾಲಾ ಆಡಳಿತ ಮಂಡಳಿ ಧೋರಣೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲಕ್ಕೆ ಸಿಲುಕಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿ ಸ್ಪಷ್ಟ ನಿರ್ದೇಶನ ನೀಡಬೇಕೆಂದು ದೂರುದಾರರು ಕೋರಿದ್ದರು.

ಆಡಳಿತ ಮಂಡಳಿಯವರು ಶಾಲಾ ದಾಖಲಾತಿಯನ್ನು ಗುಪ್ತವಾಗಿ ಪ್ರಾರಂಭಿಸಿದ್ದು, ಸಂಗ್ರಹಿಸುತ್ತಿರುವ ಹಣಕ್ಕೆ ರಸೀದಿ ನೀಡುತ್ತಿಲ್ಲ. ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಾತಿ ಪ್ರಾರಂಭಿಸಬಾರದು. ಮುಂದಿನ ವಿಚಾರಣೆವರೆಗೆ ಶಾಲೆಯ ಎಲ್ಲಾ ಚಟುವಟಿಕೆಗಳಿಗೆ ನ್ಯಾಯಾಲಯ ತಡೆ ನೀಡಿದೆ. ಹೀಗಿದ್ದರೂ ಶಾಲಾ ದಾಖಲಾತಿ ಪ್ರಾರಂಭಿಸಿರುವುದು ಸರಿಯಲ್ಲ ಎಂದು ದೂರುದಾರರು ಸರ್ಕಾರದ ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here