ಕುಂದಾಪುರ: ಅರಾಟೆ ಸೇತುವೆ ಸಮೀಪ ನದಿಯಲ್ಲಿ ಮಳಿ ಚಿಪ್ಪು ತೆಗೆಯಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಹಂಗಳೂರು ಗ್ರಾಮದ ನಿವಾಸಿ ಚಂದ್ರ (39) ಮೃತಪಟ್ಟ ದುರ್ದೈವಿ. ಚಂದ್ರ ಅವರು ಮಾರ್ಚ್ 17ರಂದು ಬೆಳಿಗ್ಗೆ ಹಂಗಳೂರಿನಲ್ಲಿರುವ ತಂಗಿ ಗೌರಿ ಅವರ ಮನೆಗೆ ಬಂದಿದ್ದರು.
ಬಳಿಕ ಅಲ್ಲಿಂದ ಭಾವ ಅಜಿತ ಅವರೊಂದಿಗೆ ಅರಾಟೆ ಸೇತುವೆ ಬಳಿ ಮಳಿ ಚಿಪ್ಪು ತೆಗೆಯಲು ಹೋಗಿದ್ದರು. ಈ ವೇಳೆ ಚಂದ್ರ ಅವರು ನೀರಿಗೆ ಇಳಿದಿದ್ದು, ಸ್ವಲ್ಪ ಸಮಯದ ನಂತರ ಅವರು ಕಾಣೆಯಾಗಿದ್ದರು. ಗಾಬರಿಗೊಂಡ ಅಜಿತ ಅವರು ತಲ್ಲೂರು ಮತ್ತು ಕುಂದಾಪುರ ಭಾಗಗಳಲ್ಲಿ ಹುಡುಕಾಟ ನಡೆಸಿದರೂ ಚಂದ್ರ ಅವರ ಪತ್ತೆಯಾಗಿರಲಿಲ್ಲ.ಮಾರ್ಚ್ 18ರಂದು ಬೆಳಿಗ್ಗೆ 9:45ರ ಸುಮಾರಿಗೆ ಅರಾಟೆ ಸೇತುವೆ ಬಳಿ ನದಿಯಲ್ಲಿ ಮೃತದೇಹವೊಂದು ತೇಲುತ್ತಿರುವುದು ಕಂಡುಬಂದಿದೆ. ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಅದು ಚಂದ್ರ ಅವರದ್ದೇ ಮೃತದೇಹ ಎಂದು ಗುರುತಿಸಿದ್ದಾರೆ. ಮಳಿಚಿಪ್ಪು ತೆಗೆಯಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

