ಉಡುಪಿ: ಏಕ ವಿನ್ಯಾಸ ನಕ್ಷೆ ಅನುಮೋದನೆ ವಿಳಂಬ ಖಂಡಿಸಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಸೋಮವಾರ ಅರ್ನಿದಿಷ್ಟವಧಿ ಧರಣಿ ಆರಂಭ ಮಾಡಿದ್ದು, ಮಂಗಳವಾರ ಮಧ್ಯಾಹ್ನ ಪ್ರಾಧಿಕಾರದ ಆಯುಕ್ತರು ಸ್ವತಃ ಸ್ಥಳಕ್ಕೆ ಆಗಮಿಸಿ ತಾತ್ಕಾಲಿಕ ವಿನ್ಯಾಸ ಅನುಮೋದನೆ ನೀಡಿ ದಾಖಲೆ ಹಸ್ತಾಂತರಿಸಿದ್ದಾರೆ.
ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ನಕ್ಷೆ ನೀಡುವಂತೆ ರಘುಪತಿ ಭಟ್ 2024ರ ಮಾ.20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಾಧಿಕಾರದ ಸಭೆಯಲ್ಲಿ ಅಗತ್ಯ ಕ್ರಮ ವಹಿಸುವಂತೆ ನಿರ್ಣಯ ಕೈಗೊಳ್ಳಲಾಗಿದ್ದರೂ ಈವರೆಗೆ ಅನುಮೋದನೆ ನೀದಿರಲಿಲ್ಲ.
ಧರಣಿ ಎರಡನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ನಗರಾಭಿವೃದ್ಧಿ ಪ್ರಾಧಿಕಾರ ಏಕವಿನ್ಯಾಸ ನಕ್ಷೆ ಮಂಜೂರು ಮಾಡಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಾಜಿ ಶಾಸಕ ರಘುಪತಿ ಭಟ್, ಎರಡು ವರ್ಫಿಗಳಿಂದ ಬಾಕಿ ಇದ್ದ ಕೆಲಸ ಹೋರಾಟದಿಂದಾಗಿ ಆಗಿದೆ. ಕಾನೂನುಪ್ರಕಾರ ಅರ್ಜಿ ಸಲ್ಲಿಸಿದ್ದೆ. ಇವತ್ತು ಹೋರಾಟಕ್ಕೆ ಜಯ ಸಿಕ್ಕಿದೆ. ಮೂರು ತಿಂಗಳಲ್ಲಿ ನೀಡಬೇಕಾದ ಅನುಮತಿ ಎರಡು ವರ್ಷದ ನಂತರ ನೀಡಿದ್ದಾರೆ. ಕಾನೂನು ಸಲಹೆಗಾರರಿಂದ ಅಭಿಪ್ರಾಯ ಪಡೆದು ಅನುಮತಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇನ್ನು ಮುಂದೆ ಜನಪರ ವಿಚಾರದಲ್ಲಿ ಹೋರಾಟ ಮಾಡುತ್ತೇನೆ. ಅಂಬಾಗಿಲು ಪರಂಪಳ್ಳಿ ರಸ್ತೆಯ ಟಿಡಿಆರ್ ಬಾಕಿ ಇಟ್ಟಿದ್ದಾರೆ. ಬಡ ಜನರು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ಕೊಟ್ಟ ಹಕ್ಕು ಪತ್ರಕ್ಕೆ ಲೇಔಟ್ ಪ್ಲಾನ್ ಕೇಳುತ್ತಿದ್ದಾರೆ. ನಗರ ಅಭಿವೃದ್ಧಿ ಪ್ರಾಧಿಕಾರ ಅವ್ಯವಸ್ಥೆಗಳ ಆಗರವಾಗಿದೆ. ಅಗತ್ಯ ಕ್ರಮಕ್ಕೆ ಏಪ್ರಿಲ್ 12ರವರೆಗೆ ಗಡುಗು ನೀಡುತ್ತಿದ್ದೇವೆ. ತಪ್ಪಿದಲ್ಲಿ ಹೋರಾಟ ಮುಂದುವರಿಸುತ್ತೇವೆ. ಶಾಸಕರಿಂದ ಸಮಸ್ಯೆ ಆದ ಕಾರಣ ಅವರ ಹೆಸರು ಹೇಳಿದ್ದೇನೆ. ನನ್ನ ಉದ್ಯಮಗಳಿಗೆ ತೊಂದರೆ ಮಾಡದಿದ್ದರೆ ಎಲ್ಲ ವಿಚಾರ ಮರೆತುಬಿಡುತ್ತೇನೆ. ನನ್ನ ವೈಯಕ್ತಿಕ ತಂಟೆಗೆ ಬಂದರೆ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

