ವಿಯೆಟ್ ನಾಮ್, ಜ. 28 : ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂ.), ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಮತ್ತು ಇಂಡೋ ವಿಯೆಟ್ ಫ್ರೆಂಡ್ಶಿಪ್ ಗ್ರೂಪ್ ಸಂಯುಕ್ತವಾಗಿ 53ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತ ವಿನಿಮಯ ಕಾರ್ಯಕ್ರಮವನ್ನು ದ ನಾಂಗ್ ನ ಸ್ಯಾನ್ ಅವತಾರ್ ಸಭಾಂಗಣದಲ್ಲಿ ಆಯೋಗಿಸಿದ್ದವು.
ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಐಸಿಎಫ್ಸಿಐ ಗೌರವ ಅಧ್ಯಕ್ಷ ಡಾ ಪಲ್ಲವಿ ಮಣಿ ಅವರು ಮಾತನಾಡಿ ಮೊದಲು ನಾವೆಲ್ಲ ನೆರಮನೆಯವರನ್ನು ಪ್ರೀತಿಸು ಎನ್ನುವ ಮಾತನಾಡುತ್ತಿದ್ದೆವು, ಈಗ ನಾವು ಅದಕ್ಕಿಂತ ಎಷ್ಟು ಮುಂದೆ ಸಾಗಿದ್ದೇವೆ ನೆರೆಯ ದೇಶವನ್ನು ಪ್ರೀತಿಸು ಎನ್ನುವ ಮಾತು ಹೆಚ್ಚು ಪ್ರಸ್ತುತ. ವಿಶ್ವ ಸೌಹಾರ್ದ ಪ್ರಿಯತೆ ನಮ್ಮೆಲ್ಲರ ಧ್ಯೇಯ ವಾಕ್ಯವಾಗಬೇಕಿದೆ. ಅಸೂಯೆ ಸೌಹಾರ್ದತೆಯ ಮೊದಲ ಶತ್ರು, ಸ್ನೇಹ ಮತ್ತು ಪ್ರೀತಿ ತುಂಬಿದ ಮನಸ್ಸುಗಳು ಹೆಚ್ಚಾದಾಗ ಇಡೀ ಜಗತ್ತೇ ಹೂವಿನ ತೋಟದಂತೆ ಗೋಚರವಾಗುತ್ತದೆ ಎಂದರು.
ವಿಶೇಷ ಆಮಂತ್ರಿಕರಾಗಿ ರಾಯಚೂರಿನ ವಾಣಿಜ್ಯೋದ್ಯಮಿ ಮತ್ತು ಸಮಾಜ ಸೇವಕ ಡಾ. ಈಡಿಗ ಆಂಜನೇಯ ಪಾಲ್ಗೊಂಡಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆಯ ನಿರ್ದೇಶಕ – ಕಾರ್ಯಕ್ರಮ ಡಾ. ಸತೀಶ್ ಕುಮಾರ್ ಹೊಸಮನಿ ಬೇರೆ ಬೇರೆ ದೇಶಗಳಲ್ಲಿ ವೈವಿಧ್ಯಮಯ ಸಂಸ್ಕೃತಿ, ಆಚಾರ ವಿಚಾರಗಳನ್ನು ನಾವು ಕಾಣುತ್ತೇವೆ. ಜಾಗತಿಕ ಜ್ಞಾನ ವ್ಯಕ್ತಿಗೆ ಉದಾತ್ತ ಮನೋಭಾವವನ್ನು ತಂದುಕೊಡುತ್ತದೆ. ಅದು ಯಶಸ್ಸು ಕೀರ್ತಿ ಪಡೆಯಲು ಪೂರಕವಾಗುವುದು ಎಂದರು.
ಐಸಿಎಫ್ಸಿಐ ಸ್ಥಾಪಕ ಅಧ್ಯಕ್ಷ ಇಂಜಿನಿಯರ್ ಕೆ ಪಿ ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಾವು 17 ವಿಶ್ವಕನ್ನಡ ಸಮ್ಮೇಳನ ಹಾಗೂ 53 ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಗಳನ್ನು 55ಕ್ಕೂ ಹೆಚ್ಚು ದೇಶಗಳಲ್ಲಿ 70ಕ್ಕೂ ಹೆಚ್ಚು ಸಮಾವೇಶಗಳನ್ನು ಆಯೋಜಿಸಿದ್ದೇವೆ. ಈ ಸಮಾವೇಶಗಳಲ್ಲಿ ಕರ್ನಾಟಕದ 5,000ಕ್ಕೂ ಹೆಚ್ಚು ಕಲಾವಿದರು, ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದು ಹೃದಯವಾಹಿನಿ- ಕರ್ನಾಟಕ ಬಳಗದ ಅದ್ವಿತೀಯ ಸಾಧನೆ ಎಂದರು.
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲಾ ಸರ್ಜನ್ ಡಾ. ಮಹೇಶ್ ಕೋಣಿ, ಭಾರತ ಸರಕಾರದ ಆಯುಷ್ ಇಲಾಖೆಯ ನಿವೃತ್ತ ವಿಜ್ಞಾನಿ ಡಾ. ಚಿಂತಾ ರವೀಂದರ್, ಎಂಎಸ್ಎನ್ಆಗ್ರೋ ಇಂಡಸ್ಟ್ರೀಸ್ ಪ್ರೖ. ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಮಹಾಂತೇಶ್ ಮಹಾಜನ್, ಕೆ ಎಲ್ ಇ ಎಜುಕೇಶನ್ ಸೊಸೈಟಿ ಸಿಬಿಎಸ್ಸಿ ಪ್ರಿನ್ಸಿಪಾಲ್ ಡಾ. ಕ್ಯಾದರಿನ್ ದಿನೇಶ್ ಕದ್ರಿ, ಯಾದಗಿರಿಯ ಯುವ ನಾಯಕ ಮತ್ತು ಸಮಾಜ ಸೇವಕ ಡಾ. ದೊಡ್ಡಪ್ಪ ಪೂಜಾರಿ ಹುಂಡೆಕರ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ವಿದುಷಿ ಅನು ಆನಂದ್ – ಭರತನಾಟ್ಯ ಬೆಂಗಳೂರು ಆರ್ ಮಂಜುನಾಥ್ – ಸ್ಯಾಕ್ಸ್ ಫೋನ್, ಹನುಮಂತರಾಜು ಮೈಸೂರು – ಮೃದಂಗ ಮತ್ತು ಕೃಷ್ಣಪ್ಪ ಗೌಡ ಪಡ್ಡಂಬೈಲು – ತಾರಸಿ ಕೃಷಿ ಇವರುಗಳಿಗೆ ” ಪ್ರೖಡ್ ಆಫ್ ಏಷಿಯಾ” ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ಡಾ. ಪ್ರಶಾಂತ್ ಅವರು ವಿಶ್ವ ಶಾಂತಿ ಕುರಿತು ಉಪನ್ಯಾಸ ನೀಡಿದರು, ಡಾ. ಅರ್ಚನಾ ಅಥಣಿ ಮತ್ತು ಡಾ. ಪ್ರಕಾಶ್ ಕಾಡೆ ಬಾಗಲಕೋಟೆ ಇವರು ತಮ್ಮ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.
ಹಿನ್ನೆಲೆ ಗಾಯಕಿ ಮತ್ತು ಅಂತರಾಷ್ಟ್ರೀಯ ಕಲಾವಿದೆ ಪುಷ್ಪ ಆರಾಧ್ಯ ಅವರ ಚಿತ್ರಗೀತೆಗಳು ಎಲ್ಲರ ಗಮನ ಸೆಳೆದವು.
ಆರತಿ ಸುರೇಶ್ ಅವರ ಏಕವ್ಯಕ್ತಿ ಯಕ್ಷಗಾನ, ಮೂಕಾಂಬಿಕಾ ಅವರ ಕೋಚುಪುಡಿ ನೃತ್ಯ, ಅಮೂಲ್ಯ ಸುಜಿತ್ ಮತ್ತು ಅನು ಆನಂದ್ ಅವರ ಭರತನಾಟ್ಯ ಪ್ರದರ್ಶನ ಸೊಗಸಾಗಿ ಮೂಡಿ ಬಂದವು.
ಮಂಜುನಾಥ್ ಮತ್ತು ಹನುಮಂತರಾಜು ಅವರ ಮೃದಂಗ ಮತ್ತು ಸ್ಯಾಕ್ಸೋ ಫೋನ್ ಜುಗಲ್ ಬಂದಿ ಪ್ರೇಕ್ಷಕರ ಗಮನ ಸೆಳೆದವು. ಚಂದ್ರ ಮೌಳಿ ಮತ್ತು ಮೃದುಲವರ ಕರಕುಶಲ ವಸ್ತುಗಳು ಪ್ರದರ್ಶನಗೊಂಡವು.
ಚಿತ್ರ ಬೆಂಗಳೂರು ಕಾರ್ಯಕ್ರಮ ನಿರೂಪಣೆ ಮಾಡಿದರು.

