ಉತ್ತರ ಪ್ರದೇಶ: ತನ್ನ ಪ್ರೇಯಸಿಯ ಮದುವೆಯಾಗುತ್ತಿದೆ ಎಂದು ಗಾಬರಿಯಿಂದ ಓಡೋಡಿ ಬಂದಿದ್ದ ವ್ಯಕ್ತಿಯನ್ನು ಯುವತಿಯ ಕುಟುಂಬಸ್ಥರು ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಲು ಮನೆಯವರು ರವಿ ಎಂಬಾತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಲು ಪ್ರಾರಂಭಿಸಿದ್ದರು. ಅದಕ್ಕೆ ಗ್ರಾಮದ ನಿವಾಸಿಗಳು ಕೂಡ ಸೇರಿಕೊಂಡರು. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ನೀರು ಕೇಳಿದಾಗಲೂ ಆತನಿಗೆ ಒಂದು ತೊಟ್ಟು ನೀರನ್ನೂ ಕೊಡದೆ ಸಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರವಿ ಸಾವನ್ನಪ್ಪಿದ ಬಳಿಕ ದಾಳಿಕೋರರು ಗಂಭೀರತೆಯನ್ನು ಅರಿತುಕೊಂಡರು.ಹುಡುಗಿಯ ಚಿಕ್ಕಪ್ಪ ಪಿಂಟು ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಪೊಲೀಸರಿಗೆ ಮಾಹಿತಿ ನೀಡಲಾಯಿತು, ಅವರು ರವಿ ಮತ್ತು ಪಿಂಟು ಅವರನ್ನು ಮೌದಾಹದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು.ಅಲ್ಲಿ ವೈದ್ಯರು ರವಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಚಿಕಿತ್ಸೆಗಾಗಿ ಪಿಂಟು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರವಿ ನಿಧನರಾದ ಸುದ್ದಿ ತಿಳಿದ ಕೂಡಲೇ ಯುವತಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆ ಮತ್ತು ಆಕೆಯ ಚಿಕ್ಕಪ್ಪ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಆಕೆಯನ್ನು ಮೌದಹಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪಿಂಟು ಮೇಲೆ ಹಲ್ಲೆ ನಡೆಸಿದ್ದು ರವಿ ಎಂದು ಕುಟುಂಬದವರು ಹೇಳಿದ್ದಾರೆ.
ಪಿಂಟುವಿನ ಹೆಂಡತಿಯಾದ ಮನೀಷಾಳ ಚಿಕ್ಕಮ್ಮ, ರವಿ ಪಿಂಟುವಿನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾಳೆ. ಪಿಂಟು ಬಾಗಿಲು ತೆರೆದಾಗ ರವಿ ಅವನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

