ವರದಿ : ಮಂದಾರ ರಾಜೇಶ್ ಭಟ್
ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನ ಆವರಣದಲ್ಲಿ ಫೆಬ್ರವರಿ 16, 2026ರಂದು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. 500 ವರ್ಷಗಳ ಹಿಂದೆ ವಿದೇಶಿ ಆಕ್ರಮಣಕಾರರ ವಿರುದ್ಧ ಸಿಡಿದೆದ್ದ ಕರಾವಳಿಯ ವೀರವನಿತೆ ರಾಣಿ ಅಬ್ಬಕ್ಕಳ ಸ್ಮರಣಾರ್ಥ “ಅಬ್ಬಕ್ಕ@500” ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಇದು ಈ ಸರಣಿಯ 100ನೇ ಸಂಭ್ರಮದ ಕಾರ್ಯಕ್ರಮವಾಗಿದ್ದು, ಇತಿಹಾಸದ ಶೌರ್ಯವನ್ನು ಇಂದಿನ ಸಾಧನೆಯೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನವಾಗಿದೆ.
ಸಂಘಟನಾ ಶಕ್ತಿ ಮತ್ತು ಶೈಕ್ಷಣಿಕ ಹಿನ್ನೆಲೆ
ಈ ಬೃಹತ್ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (KRMSS) ಮತ್ತು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತವಾಗಿ ಆಯೋಜಿಸಿವೆ. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ (ABRSM) ಆಶಯದಂತೆ ಶಿಕ್ಷಣದಲ್ಲಿ ಭಾರತೀಯತೆ ಮತ್ತು ರಾಷ್ಟ್ರೀಯತೆಯನ್ನು ಬಿತ್ತುವ ಉದ್ದೇಶದಿಂದ ಈ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.
ಕಾರ್ಯಕ್ರಮವು ಇತಿಹಾಸದ ಮರುಚಿಂತನೆ ಮಾಡುವ ವೈವಿಧ್ಯಮಯ ಗೋಷ್ಠಿಗಳನ್ನು ಒಳಗೊಂಡಿದೆ.
ಗೋಷ್ಠಿ – 1 : ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆಯ ಕುರಿತು ಚಿಂತನೆ ಜರುಗಲಿದೆ.
ಗೋಷ್ಠಿ – 2 : ಭಾರತದ ಇತಿಹಾಸಕ್ಕೆ ರಾಣಿ ಅಬ್ಬಕ್ಕ ನೀಡಿದ ಅಪ್ರತಿಮ ಕೊಡುಗೆಯ ಕುರಿತು ಚರ್ಚೆ ನಡೆಯಲಿದೆ.
ಸಾಂಸ್ಕೃತಿಕ ಪ್ರಸ್ತುತಿ : ಇತಿಹಾಸವನ್ನು ಕಲಾತ್ಮಕವಾಗಿ ಕಟ್ಟಿಕೊಡಲು ‘ಕಲಾ ಸಾರಥಿ’ ತಂಡದಿಂದ “ವೀರ ರಾಣಿ ಅಬ್ಬಕ್ಕ ಕಥಾ ಕೀರ್ತನೆ” ಹಮ್ಮಿಕೊಳ್ಳಲಾಗಿದೆ.
ವೀರರಾಣಿ ಅಬ್ಬಕ್ಕ ಗೌರವ-ಪುರಸ್ಕಾರ
ಅಬ್ಬಕ್ಕನ ಶೌರ್ಯದ ಪ್ರತಿರೂಪವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 15 ಮಂದಿ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ.
ಕಲೆ ಮತ್ತು ಸಾಹಿತ್ಯ
ಸುಮಂಗಲ ರತ್ನಕರ್ ರಾವ್ (ಭಾರತೀಯ ಕಲೆ), ಪೂರ್ಣಿಮಾ ಯತೀಶ್ ರೈ (ಯಕ್ಷಗಾನ), ಶುಭಾಶಯ ಜೈನ್ (ಯಕ್ಷಗಾನ ಸಾಹಿತ್ಯ), ಕಮಲಾ ನಲಿಕೆ (ಜಾನಪದ), ಸುಶ್ರಾವ್ಯ ಯು (ನೃತ್ಯ) ಮತ್ತು ಯಶೋದಾ ಕೇಶವ್ (ತುಳು ಸಾಹಿತ್ಯ).
ಸಮಾಜ ಮತ್ತು ಪರಿಸರ
ಡಾ. ಆಶಾ ಜ್ಯೋತಿ ರೈ (ಸಮಾಜ ಸೇವೆ), ಸುರೇಖಾ ಶೆಟ್ಟಿ (ಮಹಿಳಾ ಸಬಲೀಕರಣ), ಸಂಧ್ಯಾ (ಪರಿಸರ) ಮತ್ತು ವನಜಾ ಪೂಜಾರ್ತಿ (ರುದ್ರಭೂಮಿ ಸೇವೆ).
ವಿಶಿಷ್ಟ ಸಾಧನೆ
ಕೆ.ಬಿ. ಅಮ್ಮಣ್ಣಿ (ನಾಟಿ ವೈದ್ಯೆ), ಡಾ. ಗ್ರೀಷ್ಮಾ ವಿವೇಕ್ ಆಳ್ವ (ಪ್ರಕೃತಿ ಚಿಕಿತ್ಸೆ), ಸಿ.ಎಸ್. ರಾಧಿಕಾ (ಅಂಬುಲೆನ್ಸ್ ಚಾಲನೆ), ಮಹಾಲಕ್ಷ್ಮೀ (ಉದ್ಯಮ) ಮತ್ತು ಗೀತಾ ಲಕ್ಷ್ಮೀಶ್ (ಬಾಲಸಂಸ್ಕಾರ).
ಅಂದು, ಇಂದು ಮತ್ತು ಮುಂದಕ್ಕೆ ದಾರಿದೀಪ
ಈ ವಿಚಾರ ಸಂಕಿರಣವು ‘ಅಂದಿನ’ ಇತಿಹಾಸದ ವೀರಗಾಥೆಯನ್ನು ಮರೆತುಹೋಗದಂತೆ ಸಂರಕ್ಷಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ. ಸಮಾಜದ ವಿವಿಧ ಸ್ತರಗಳ ಸಾಧಕಿಯರನ್ನು ಸನ್ಮಾನಿಸುವ ಮೂಲಕ ‘ಇಂದಿನ’ ಸ್ತ್ರೀಶಕ್ತಿಗೆ ಗೌರವ ಸಲ್ಲಿಸಿ, ಅವರನ್ನು ಆಧುನಿಕ ಕಾಲದ ಅಬ್ಬಕ್ಕನ ಪ್ರತೀಕಗಳಾಗಿ ಪ್ರತಿಷ್ಠಾಪಿಸಿದೆ. ಈ ಕಾರ್ಯಕ್ರಮವು ‘ಮುಂದಿನ’ ಯುವ ಪೀಳಿಗೆಗೆ ದೇಶಪ್ರೇಮ, ಸ್ವಾಭಿಮಾನ ಮತ್ತು ಧೈರ್ಯದ ಹಾದಿಯನ್ನು ತೋರುವ ದಾರಿದೀಪವಾಗಲಿ, ಭೂತಕಾಲದ ಸ್ಫೂರ್ತಿ, ವರ್ತಮಾನದ ಶ್ರಮ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಒಟ್ಟುಗೂಡಿಸಿರುವ ಈ ‘ಅಬ್ಬಕ್ಕ@500’ ರಾಷ್ಟ್ರದ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಲಿ.

