ಕಾರ್ಕಳ ಬಿಎಸ್ಸಿ ನರ್ಸಿಂಗ್ ಕಾಲೇಜಿನ ಸಮಸ್ಯೆಗಳ ವಿರುದ್ಧ ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

0
110

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ ಕಾರ್ಕಳದ ಸರಕಾರಿ ನರ್ಸಿಂಗ್ ಕಾಲೇಜಿನ ಮೂಲಸೌಕರ್ಯದ ಕೊರತೆಯ ಕುರಿತು, ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು, ಅಧಿಕಾರಿಗಳ ಬೆಜವಾಬ್ದಾರಿಯನ್ನು ಖಂಡಿಸಿ ಸ್ವಂತ ಕಟ್ಟಡ, ಮೂಲ ಸೌಕರ್ಯ, ಉಪನ್ಯಾಸಕರಿಲ್ಲದೇ ಹತ್ತು ಹಲವಾರು ಸಮಸ್ಯೆಗಳಿಂದ ಸೊರಗಿರುವ ಕಾರ್ಕಳ ಬಿಎಸ್ಪಿ ನರ್ಸಿಂಗ್ ಕಾಲೇಜಿನ ಬೇಡಿಕೆಗಳ ಈಡೇರಿಕೆಗಾಗಿ ಅ. 29ರಂದು ಎಬಿವಿಪಿಯಿಂದ ಬೃಹತ್‌ ಪ್ರತಿಭಟನೆ ನಡೆಯಿತು.

ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿರುವ ಕಾಲೇಜು ಆವರಣದಿಂದ ಕಾರ್ಕಳ ತಾಲೂಕು ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಬಂದ ವಿದ್ಯಾರ್ಥಿಗಳು ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಎಬಿಪಿವಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ ಮಾತನಾಡಿ, 2022ರ ಎಪ್ರಿಲ್‌ನಲ್ಲಿ ಕಾರ್ಕಳದಲ್ಲಿ ಬಿಎಸ್ಪಿ ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್ ಪ್ರಾರಂಭವಾಗಿದೆ. ಈ ಬ್ಯಾಚಿನ ವಿದ್ಯಾರ್ಥಿಗಳು 2026ರಲ್ಲಿ ತೇರ್ಗಡೆಯಾಗಲಿದ್ದಾರೆ. ಕಾಲೇಜು KNC ಅನುಮೋದಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದೆಯಾದರೂ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ ಎಂದರು. ದ. ಕ. ಉಡುಪಿ ಜಿಲ್ಲೆಯಲ್ಲಿರುವ ಏಕೈಕ ಸರಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜು ಇದಾಗಿದ್ದು, ಕಾಲೇಜು ಸ್ಥಾಪನೆಯಾಗಿ 4 ವರ್ಷ ಕಳೆದರೂ ಇದುವರೆಗೂ ಸ್ವಂತ ಕಟ್ಟಡವಾಗಲಿ, ಅಗತ್ಯ ಉಪನ್ಯಾಸಕರಾಗಲಿ, ಮೂಲಭೂತ ಸೌಕರ್ಯಗಳಾಗಲಿ ಇಲ್ಲ. ಪ್ರಸ್ತುತ ಕಾರ್ಕಳ ಸರಕಾರಿ ತಾಲೂಕು ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿದೆ ಎಂದರು.

4 ವರ್ಷದ ಈ ಕೋರ್ಸಿಗೆ ಪ್ರತಿ ಬ್ಯಾಚ್ 40 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದ್ದು ಒಟ್ಟು 160 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾಲೇಜಿಗೆ INC ಮಾನ್ಯತೆ ದೊರೆಯದೆ ಇರುವುದರಿಂದ ಕಾಲೇಜಿನಲ್ಲಿ ಕಲಿತವರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮತ್ತು ವಿದೇಶಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಲೇಜಿನಲ್ಲಿ ಕೇವಲ ಮೂವರು ಉಪನ್ಯಾಸಕರಿದ್ದು INC ಪ್ರಮಾಣೀಕರಣ ದೊರೆಯಲು ಕನಿಷ್ಠ 16 ಉಪನ್ಯಾಸಕರು ಬೇಕು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಕಚೇರಿ ಕೆಲಸ ಮಾಡಲು ಮತ್ತು ಕಾಲೇಜಿನ ನಿರ್ವಹಣೆಗೆ ಗುಮಾಸ್ತರು, ಕಂಪ್ಯೂಟರ್ ಸಹಾಯಕರು, ಸ್ವಚ್ಛತಾ ಸಿಬ್ಬಂದಿ ಅವಶ್ಯಕತೆಯಿದೆ. ಕ್ಷೇತ್ರ ಭೇಟಿಗೆ ಬಸ್ ಮತ್ತು ವಾಹನ ಚಾಲಕರ ಅವಶ್ಯಕತೆಯಿದೆ. ಕಾಲೇಜಿಗೆ ತಾತ್ಕಾಲಿಕವಾಗಿ ಒದಗಿಸಿರುವ ಆಸ್ಪತ್ರೆಯ ಹಳೆಯ ಕಟ್ಟಡ ಸೋರುತ್ತಿದ್ದು ವಿದ್ಯುತ್ ಶಾಕ್ ಹೊಡೆಯುವ ಸಂಭವವಿದೆ. ಆದ್ದರಿಂದ ಹೊಸ ಕಟ್ಟಡ ನಿರ್ಮಾಣವಾಗುವರೆಗೆ ಹಳೆಯ ಕಟ್ಟಡವನ್ನು ತುರ್ತಾಗಿ ದುರಸ್ಥಿಗೊಳಿಸುವುದು ಅಗತ್ಯವಾಗಿದೆ. ಕಾಲೇಜು ಸರಕಾರದ ಯಾವ ಇಲಾಖೆಗೆ ಸೇರಬೇಕು ಎಂಬ ಸ್ಪಷ್ಟತೆ ಇದುವರೆಗೂ ಸಿಕ್ಕಿಲ್ಲ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ವಿದ್ಯಾರ್ಥಿಗಳು ಮನವಿಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here