ಆರ್. ಪಿ ಕಲಾ ಸೇವಾ ಟ್ರಸ್ಟ್ (ರಿ )ಪಾಂಬಾರು ಸಹಯೋಗದಲ್ಲಿ ಜ್ಞಾನ ದೀಪ ವಿದ್ಯಾ ಸಂಸ್ಥೆ ಬೆಳ್ಳಾರೆ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ 2025ನೇ ಸಾಲಿನಲ್ಲಿ ಗಾಯನ ಕ್ಷೇತ್ರದಲ್ಲಿ ಅಖಿಲಾ ನೆಕ್ರಾಜೆ ಅವರು ಗಣನೀಯ ಸಾಧನೆಗೈದು, ಸಾಂಸ್ಕೃತಿಕ ಪರಂಪರೆಯ ಹಿರಿಮೆ ಗರಿಮೆ ಹೆಚ್ಚಿಸಿ ಪ್ರಶಂಸೆಗೆ ಪಾತ್ರರಾಗಿರುವ ತಮಗೆ “ಕರ್ನಾಟಕ ಸೇವಾ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶೀನಪ್ಪ ಶೆಟ್ಟಿ ಮತ್ತು ಚಂದ್ರಾವತಿ ದಂದಪತಿಗಳ ಪುತ್ರಿಯಾಗಿರುವ ಇವರು ಪುಣ್ಚಪ್ಪಾಡಿ ಗ್ರಾಮ ಕಡಬ ತಾಲೂಕುನಲ್ಲಿ ನೆಲೆಸಿರುತ್ತಾರೆ. ಎಂ ಎಸ್ ಸಿ ಇನ್ ಮೈಕ್ರೋ ಬಯಾಲಜಿ 2024ರಲ್ಲಿ ಮೈಸೂರಿನಲ್ಲಿ ಮುಗಿಸಿ ಹಾಗೂ ಪ್ರಸ್ತುತ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಐಸಿಎಆರ್- ಸಿ.ಪೀ.ಸಿ.ಆರ್.ಐ ವಿಟ್ಲ ದಲ್ಲಿ ರಿಸರ್ಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಪಾರ್ವತಿ ಗಣೇಶ್ ಭಟ್ ಇವರ ಬಳಿ ಹಾಗೆಯೇ ಐದು ವರ್ಷ ಸುಗಮ ಸಂಗೀತವನ್ನು ಡಾಕ್ಟರ್ ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಕಲಿತಿರುತ್ತಾರೆ.
ಬಾಲ್ಯದಿಂದಲೇ ಸಂಗೀತವನ್ನು ಕಲಿಯಲು ಆರಂಭಿಸಿದ ಇವರು ಸಾವಿರಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಲೆಯನ್ನು ಪ್ರದರ್ಶಿಸಿ ಗುರು ಹಿರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಪ್ರತಿಭಾ ಕಾರಂಜಿ ರಿಯಾಲಿಟಿ ಶೋ ಗಳಂತಹ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಆಲ್ಬಮ್ ಸಾಂಗ್ ಹಾಗೆಯೆ ಕಿರು ಚಿತ್ರದಲ್ಲಿಯೂ ಹಿನ್ನೆಲೆ ಗಾಯಕಿಯಾಗಿ ಹಾಡಿರುವ ಇವರು ಅಂತರ್ ರಾಜ್ಯದಲ್ಲೂ ಹೋಗಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಪ್ರಸ್ತುತ ಸುಗಮ ಸಂಗೀತವನ್ನು ತನ್ನ ಗ್ರಾಮದ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಹಾಗೆಯೇ ಕಳೆದ ಎರಡು ವರ್ಷಗಳಿಂದ ಅಂದರೆ 22ನೇ ವಯಸ್ಸಿನಿಂದಲೇ ವಿದೇಶದಲ್ಲಿ ಇರುವ ಮಕ್ಕಳಿಗೆ ಸುಗಮ ಸಂಗೀತವನ್ನು ಕಲಿಸುತ್ತಿದ್ದಾರೆ. ಹೆಸರಾಂತ ಕವಿಗಳು ಬರೆದ 50 ಕ್ಕೂ ಹೆಚ್ಚು ಹಾಡುಗಳಿಗೆ ಹಿನ್ನೆಲೆ ಗಾಯನ ಮಾಡಿರುವ ಇವರು, ಸಂಗೀತದ ಜೊತೆ ಚಿತ್ರಕಲೆ ,ನೃತ್ಯ, ನಾಟಕಗಳಲ್ಲಿಯೂ ಪರಿಣಿತಿಯನ್ನು ಹೊಂದಿದ್ದಾರೆ.
ತಮ್ಮ ಗ್ರಾಮದ ಮಕ್ಕಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ, ಅವರೂ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ನಿಟ್ಟಿನಲ್ಲಿ ಸಂಗೀತ ಅಭ್ಯಾಸವನ್ನು ತನ್ನ ಊರಿನಲ್ಲಿಯೇ ಮಾಡುತ್ತಿದ್ದಾರೆ.

