ರಾಷ್ಟ್ರಭಾಷೆಯಾಗಿ ಹಿಂದಿಗಿಂತ ಸಂಸ್ಕೃತವೇ ಸೂಕ್ತ ಎಂದು ಅಂಬೇಡ್ಕರ್ ಸಲಹೆ ನೀಡಿದ್ದರು : ಡಾ. ಮೂಡ್ನಕೂಡು ಬಿ. ಚನ್ನಸ್ವಾಮಿ

0
28


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ಮತ್ತು ಸಂಸ್ಕೃತ ಸಾಹಿತ್ಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರ
ಬೆಂಗಳೂರು, ಅ.11: ಡಾ. ಅಂಬೇಡ್ಕರ್ ಅವರು ಸಂಸ್ಕೃತ ಭಾಷೆಯಲ್ಲಿ ಅಗಾಧ ಜ್ಞಾನ ಹೊಂದಿದ್ದರು. ಎಲ್ಲಾ ವಾದಗಳಲ್ಲಿ ಗೆಲುವು ಸಾಧಿಸಲು ಸಂಸ್ಕೃತ ಪಾಂಡಿತ್ಯ ಅಗತ್ಯ ಎಂಬು ಬಲವಾಗಿ ನಂಬಿದ್ದರು. ರಾಷ್ಟ್ರಭಾಷೆಯಾಗಿ ಹಿಂದಿಗಿಂತ ಸಂಸ್ಕೃತವೇ ಸೂಕ್ತವೆಂದು ಅವರು ಸಲಹೆ ನೀಡಿದ್ದರು ಎಂದು ಸಾಹಿತಿ ಡಾ. ಮೂಡ್ನಕೂಡು ಬಿ. ಚನ್ನಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ “ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನ ಮತ್ತು ಸಂಸ್ಕೃತ ಸಾಹಿತ್ಯ” ವಿಷಯ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತ ಬಾಬಾ ಸಾಹೇಬರ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿತ್ತು. ಆದರೆ ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಯಾರೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದರೆ ಇಲ್ಲಿ ಸಹಸ್ರಾರು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನ ಮಾಡುತ್ತಿರುವುದು ತಮಗೆ ಸಂತೋಷವನ್ನುಂಟುಮಾಡಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, “ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಡಾ. ಅಂಬೇಡ್ಕರ್ ಮತ್ತು ಸಂಸ್ಕೃತದ ಕುರಿತಾದ ಚರ್ಚೆಗಳು ಮಹತ್ವಪೂರ್ಣವಾಗಿವೆ. ನಾನು ನಿಮ್ಮಂತೆ ವಿದ್ಯಾರ್ಥಿಯಾಗಿರಬೇಕಿತ್ತು. ವಿದ್ಯಾರ್ಥಿ ಜೀವನ ನಿಜಕ್ಕೂ ಸುವರ್ಣಯುಗ. ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾತೃಗಳ ಬಗ್ಗೆ ಅಧ್ಯಯನ ನಡೆಸಬೇಕು. ರಾಜ್ಯಾದ್ಯಂತ 11,000 ಎಸ್‌ಸಿ, 10,000 ಎಸ್‌ಟಿ, ಮತ್ತು 30,000ಕ್ಕೂ ಹೆಚ್ಚು ಒಬಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಡಿಯಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಕಾರ್ಯಾಗಾರವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರಿನ ಕುಲಪತಿ ಡಾ. ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯ ಎಸ್. ಅವರು ವಹಿಸಿದ್ದರು. ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ. ವೆಂಕಟೇಶ್, ಕುಲಸಚಿವ ಪ್ರೊ. ಗಿರೀಶ್ ಚಂದ್ರ ವಿ.ಹಣಕಾಸು ಅಧಿಕಾರಿ ಶೃತಿ ಐ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here