ದುಬೈ:ಸಂಗೀತ ಪ್ರಿಯರಿಗಾಗಿ ಮತ್ತೊಂದು ಸುವರ್ಣಾವಕಾಶ! ಖ್ಯಾತ ಗಾಯಕ ಅಶೋಕ್ ಅಂಚನ್ ಅವರ ನೇತೃತ್ವದಲ್ಲಿ, ಸಪ್ತ ಸ್ವರ ಹಾಡುಗಾರರ ತಂಡವು ಅಕ್ಟೋಬರ್ 12ರಂದು ಜುಮೈರಾ ಎಮಿರೇಟ್ಸ್ ಥಿಯೇಟರ್ನಲ್ಲಿ “ಅನ್ಮೂಲ್ ಯಾದೇ” ಎಂಬ ಶೀರ್ಷಿಕೆಯಡಿ ಒಂದು ಸ್ಮರಣೀಯ ಗೋಲ್ಡನ್ ಮೆಲೋಡೀಸ್ ಸಂಗೀತ ಸಂಭ್ರಮವನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ, ತುಳು, ಕೊಂಕಣಿ ಹಾಗೂ ಹಿಂದಿ ಸೇರಿದಂತೆ ನಾಲ್ಕು ಭಾಷೆಗಳ ಮಧುರ ಗೀತೆಗಳನ್ನು 12ಕ್ಕೂ ಹೆಚ್ಚು ಪ್ರತಿಭಾವಂತ ಗಾಯಕರು ಹಾಗೂ ಗಾಯಕಿಯರು ತಮ್ಮ ವಿಶಿಷ್ಟ ಧ್ವನಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಕಳೆದ ದಶಕದ ಜನಪ್ರಿಯ ಹಳೆಯ ಹಾಗೂ ಹೊಸ ಮೆಲೋಡಿ ಹಾಡುಗಳ ಸ್ಮರಣೀಯ ಸಂಗ್ರಹ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ.
ಈ ಸಂಭ್ರಮವನ್ನು ಎಂಎಂಇ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಪ್ರಸ್ತುತಪಡಿಸುತ್ತಿದ್ದು, ಕರ್ನಾಟಕ ಸಂಘ ದುಬೈಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಸಂಭ್ರಮಕ್ಕೆ ಲೈವ್ ಆರ್ಕೆಸ್ಟ್ರಾ ಸಹಿತ ಅತ್ಯುನ್ನತ ಮಟ್ಟದ ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಅಶೋಕ್ ಅಂಚನ್ ಅವರಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮವು ದುಬೈಯಲ್ಲಿ ಇರುವ ಭಾರತೀಯ ಸಮುದಾಯದ ಮನಸ್ಸು ಗೆಲ್ಲುವ ಪ್ರಯತ್ನವಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಸಂಗೀತಾಸಕ್ತರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾಗವಹಿಸಿ ಈ ಮೆಲೋಡಿ ಸಂಭ್ರಮವನ್ನು ಆನಂದಿಸಲು ಆಹ್ವಾನಿಸಲಾಗಿದೆ.