ಜ.25-29 ರವರೆಗೆ ಅತ್ತೂರು ಸಂತ ಲೋರೆನ್ಸ್ ಬಸಲಿಕದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

0
60

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ 2026ರ ಜಾತ್ರಾ ಮಹೋತ್ಸವವು ಜ. 25ರಿಂದ 29ರವರೆಗೆ ನಡೆಯಲಿದೆ ಎಂದು ಬಸಿಲಿಕಾದ ನಿರ್ದೇಶಕ ಧರ್ಮಗುರು ಅಲ್ಬನ್‌ ಡಿಸೋಜಾ ಹೇಳಿದರು.

ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಜ. 16ರಿಂದ 24ರವರೆಗೆ ನವದಿನಗಳ ಪ್ರಾರ್ಥನೆ ಆಯೋಜಿಸಲಾಗಿದೆ.

ಜ.24ರಂದು ಅಸ್ವಸ್ಥರಿಗಾಗಿ ವಿಶೇಷ ಬಲಿ ಪೂಜೆ ನೆರವೇರಲಿದೆ.ಈ ವರ್ಷದ ಮಹೋತ್ಸವದ ಧೈಯವಾಕ್ಯವಾಗಿ “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ” ಎಂಬ ಸಂದೇಶವನ್ನು ಆಯ್ಕೆ ಮಾಡಲಾಗಿದೆ. ಈ ಧೈಯವು ಮಾನವೀಯತೆ, ಪ್ರೀತಿ ಮತ್ತು ಸೇವಾಭಾವನೆಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದೆ ಎಂದರು.

ಮಹೋತ್ಸವದ ಪ್ರಮುಖ ದಿನಗಳಲ್ಲಿ ವಿವಿಧ ಧರ್ಮಾಧ್ಯಕ್ಷರು ಹಾಗೂ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಜನವರಿ 25ರಂದು ಉಡುಪಿ ಧರ್ಮಪ್ರಾಂತ್ಯದ ಜೆರಾಲ್ಡ್ ಐಸಾಕ್ ಲೋಬೊ ಧರ್ಮಾಧ್ಯಕ್ಷರು ಹಾಗೂ ಮಂಗಳೂರು ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲುವಿಸ್‌ ಪಾಮ್ಲ ಡಿ’ಸೋಜಾ ಅವರ ಉಪಸ್ಥಿತಿಯಲ್ಲಿ ಬಲಿಪೂಜೆ ನಡೆಯಲಿದೆ. ಜನವರಿ 26ರಂದು ಕಾರವಾರದ ಪರಮಪೂಜ್ಯ ದುಮಿಂಗ್ ಡಾಯಸ್‌ ಧರ್ಮಾಧ್ಯಕ್ಷರು, ಜನವರಿ 27ರಂದು ಅಲ್ಲಾಹಾಬಾದ್‌ನ ಪರಮಪೂಜ್ಯ ಲುವಿಸ್ ಮಸ್ಕರೇನಸ್ ಧರ್ಮಾಧ್ಯಕ್ಷರು, ಜನವರಿ 28ರಂದು ಉಡುಪಿ ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಅಜೀರ್‌ನ ಜೋನ್ ಕರ್ವಾಲ್ಲೊ ಧರ್ಮಾಧ್ಯಕ್ಷರು, ಜನವರಿ 29ರಂದು ಮಂಗಳೂರು ಧರ್ಮಾಧ್ಯಕ್ಷರಾದ ಪೀಟ‌ರ್ ಪಾವ್ಕ್ ಸಲ್ದಾನ್ಹಾ ಅವರು ಬಲಿಪೂಜೆ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಜಾತ್ರಾ ಮಹೋತ್ಸವದ ಅಂಗವಾಗಿ ಜ. 29ರಂದು ಚರ್ಚ್ ಅವರಣದಲ್ಲಿ ಸತ್ಯದರ್ಶನ ಎಂಬ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಚರ್ಚ್ ಆವರಣದಲ್ಲಿ ನಲವತ್ತಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯ ಭಾಗವಾಗಿ ಬಡವರಿಗಾಗಿ ಐದಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಪ್ರತಿಯೊಂದು ಮನೆಗೆ ಸುಮಾರು ಅಂದಾಜು 10 ಲಕ್ಷ ರೂ.ಗೂ ಹೆಚ್ಚು ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ವಂದನೀಯ ರೊಬಿನ್ ಸಾಂತ್ ಮಾಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್‌ ನೊರೊನ್ಹಾ ಸದಸ್ಯರಾದ ವಂದೀಶ್ ಮತಾಯಸ್‌, ವಲೇರಿಯನ್ ಪ್ಯಾಸ್, ಮೆಲ್ವಿನ್ ಕ್ಯಾಸ್ತಲಿನೊ, ಜಾನ್ಸನ್ ಡಿಸಿಲ್ವಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here